ನವದೆಹಲಿ:‘ನನಗೆ ರಾಷ್ಟ್ರಪತಿ ಹುದ್ದೆ ನೀಡುವ ವಿಚಾರವನ್ನಾಗಲೀ, ಮಗಳು ಸುಪ್ರಿಯಾ ಸುಳೆಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ವಿಚಾರವನ್ನಾಗಲೀ ಪ್ರಧಾನಿ ಮೋದಿ ನನ್ನ ಜತೆ ಮಾತನಾಡಿರಲಿಲ್ಲ’ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.
‘ಎನ್ಡಿಟಿವಿ’ಗೆ ಸಂದರ್ಶನ ನೀಡಿರುವ ಅವರು,ದೇಶದ ಹಿತಾಸಕ್ತಿ ದೃಷ್ಟಿಯಿಂದ ಪರಸ್ಪರ ಬೆಂಬಲ ಹಾಗೂ ಸಹಕಾರದಿಂದ ಕೆಲಸ ಮಾಡುವ ಬಗ್ಗೆ ಮೋದಿ ಅವರು ಮಾತಾಡಿದ್ದರು ಎಂದಿದ್ದಾರೆ.
ಮರಾಠಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪವಾರ್, ‘ನನಗೆ ರಾಷ್ಟ್ರಪತಿ ಹುದ್ದೆ ನೀಡುವ ಬಗ್ಗೆ ಮಾತುಕತೆ ನಡೆದಿದೆ ಎಂಬುದು ಸುಳ್ಳು. ಆದರೆ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ಮಗಳು ಸುಪ್ರಿಯಾ ಸುಳೆಗೆ ಸಚಿವ ಸ್ಥಾನ ನೀಡುವ ಪ್ರಸ್ತಾವ ಇಡಲಾಗಿತ್ತು’ ಎಂದು ಹೇಳಿದ್ದಾಗಿ ವರದಿಯಾಗಿತ್ತು.
ಅಜಿತ್ ನಡೆಯ ಬಗ್ಗೆ ಅರಿವಿತ್ತು:ದೇವೇಂದ್ರ ಫಣಡವೀಸ್ ಜತೆ ಅಜಿತ್ ಪವಾರ್ ಮಾತುಕತೆ ನಡೆಸುತ್ತಿದ್ದ ವಿಚಾರ ತಮಗೆ ತಿಳಿದಿತ್ತು ಎಂದು ಪವಾರ್ ಹೇಳಿದ್ದಾರೆ.
‘ಮಾತುಕತೆ ಬಗ್ಗೆ ನನಗೇನೂ ತಿಳಿದಿರಲಿಲ್ಲ ಎಂಬುದು ಸರಿಯಲ್ಲ. ಆದರೆ, ಅಜಿತ್ ಈ ಮಟ್ಟಕ್ಕೆ ಹೋಗುತ್ತಾರೆ, ತರಾತುರಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತದೆ ಎಂದು ಊಹಿಸಿರಲಿಲ್ಲ’ ಎಂದು ಪವಾರ್ ಹೇಳಿದ್ದಾರೆ.