ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇರೆ ಯಾರಿಗೂ ಸಾಧ್ಯವಾಗದಿದ್ದಾಗ ಶಿವಸೇನಾವು ತನ್ನ ಮುಂದಿನ ಕಾರ್ಯತಂತ್ರತಿಳಿಸಲಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಸರ್ಕಾರ ರಚನೆಗೆ ಬಿಜೆಪಿಗೆಆಹ್ವಾನ ನೀಡಿರುವುದನ್ನುಸ್ವಾಗತಿಸುತ್ತೇವೆ. ರಾಜ್ಯಪಾಲರ ಮಧ್ಯಪ್ರವೇಶದಿಂದಾದರೂ ಹೊಸ ಸರ್ಕಾರ ರಚನೆಯಾಗಲಿದೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.
ಏಕೈಕ ಅತಿದೊಡ್ಡ ಪಕ್ಷವನ್ನು ಕರೆಯಬೇಕಾಗಿತ್ತು ಅದರಂತೆ ಸರ್ಕಾರ ರಚನೆಗೆ ಆಹ್ವಾನ ಸಿಕ್ಕಿದೆ. ಬಿಜೆಪಿಗೆ ಬಹುಮತವಿದೆ ಎಂಬ ವಿಶ್ವಾಸವಿದ್ದರೆ ಫಲಿತಾಂಶ ಹೊರಬಿದ್ದ 24 ಗಂಟೆಗಳಲ್ಲಿ ಏಕೆ ಸರ್ಕಾರ ರಚನೆ ಹಕ್ಕು ಪಡೆಯಲಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಇದೀಗ ರಾಜ್ಯಪಾಲರಿಂದ ಮೊದಲ ಹಂತ ಮುಗಿದಿದೆ. ಮುಂದೆ ಸರ್ಕಾರ ರಚಿಸಲು ಯಾರಿಗೂ ಸಾಧ್ಯವಾಗದಿದ್ದಾಗ ಶಿವಸೇನಾವು ತನ್ನ ಮುಂದಿನ ನಡೆಯನ್ನು ತಿಳಿಸಲಿದೆ ಎಂದು ಹೇಳಿದರು.
ಉದ್ದವ್ ಠಾಕ್ರೆ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗಾಗಲೇ ಹೇಳಿದಂತೆ ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ.ಬೆದರಿಸಿ ರಾಜಕೀಯ ಬೆಂಬಲ ಪಡೆಯಲು ಸಾಧ್ಯವಾಗದಿದ್ದಾಗ ಹಿಟ್ಲರ್ ಸತ್ತಿದ್ದಾನೆ ಎಂದೇ ಅರ್ಥ ಮತ್ತು ಗುಲಾಮಗಿರಿಯ ಕಾರ್ಮೋಡಗಳು ಸರಿದಿವೆ ಎಂದು ಸಂಜಯ್ ರಾವುತ್ ಅವರು ಮುಖ್ಯಮಂತ್ರಿ ಪಢಣವೀಸ್ ಅವರ ಹೆಸರನ್ನು ಹೇಳದೇ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.