ನೊಯ್ಡಾ: ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳಿಗೆ ಮತ್ತು ಬರುವ ರಾಸಾಯನಿಕ ಕುಡಿಸಿ (ಸೈನೈಡ್ ) ನಂತರ ಕೊಲೆ ಮಾಡಿರುವ ಘಟನೆಘಾಜಿಯಾಬಾದ್ನಲ್ಲಿ ನಡೆದಿದೆ.
ಮೂಲತಃ ಘಾಜಿಯಾಬಾದ್ ಇಂದಿರಾಪುರ ನಿವಾಸಿ ಸುಮಿತ್ಕುಮಾರ್ (34) ಎಂಬಾತನ ಈ ಕೃತ್ಯ ಎಸಗಿದವನು. ಈತ ತನ್ನ ಪತ್ನಿ ಅನ್ಷು ಬಾಲಾ (32), ಮಕ್ಕಳಾದ ಆರು ವರ್ಷದ ಪ್ರಥಮೇಶ್, ಅವಳಿ ಮಕ್ಕಳಾದ ನಾಲ್ಕು ವರ್ಷದ ಆರವ್, ಆಕೃತಿ ಕೊಲೆಯಾದವರು.ಪತ್ನಿ ಹಾಗೂ ಮಕ್ಕಳಿಗೆ ಮತ್ತು ಬರುವ ಔಷಧ ಕುಡಿಸಿ ನಂತರ ಅವರು ಮಲಗಿದಾಗ ಚಾಕುವಿನಿಂದ ಕೊಲೆ ಮಾಡಿದ್ದಾನೆ.
ಆರೋಪಿ ವಿಡಿಯೋ ಮಾಡಿ ವಾಟ್ಸ್ ಆಪ್ ನಲ್ಲಿ ಸಂಬಂಧಿಕರಿಗೆ ಕಳುಹಿಸಿದ್ದಾನೆ. ಅದರಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸೈನೈಡ್ ಖರೀದಿಸಿ ತಂದಿರುವುದಾಗಿ ತಿಳಿಸಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಆತನ ಸೋದರಿ ತನ್ನ ಭಾವನಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ. ಕೂಡಲೆ ಅಲ್ಲಿಗೆ ಹೋಗಿ ನೋಡಿದಾಗ ಮನೆಯಲ್ಲಿ ಬೀಗ ಹಾಕಿದ ಸ್ಥಿತಿಯಲ್ಲಿ ಬಾಗಿಲು ಭದ್ರಪಡಿಸಲಾಗಿತ್ತು. ಕೂಡಲೆ ಬೀಗ ಮುರಿದು ನೋಡಿದಾಗ ಅನ್ಷುಬಾಲಾ ಹಾಗೂ ಮಕ್ಕಳುರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಅವರ ಕುತ್ತಿಗೆಯಲ್ಲಿ ಚಾಕುವಿನಿಂದ ಕೊಯ್ದ ಗುರುತುಗಳಿದ್ದವು ಎಂದು ಅನ್ಷುಬಾಲಾ ಸೋದರ ಪಂಕಜ್ ಸಿಂಗ್ ತಿಳಿಸಿದ್ದಾರೆ.
ಸುಮಿತ್ ಪತ್ನಿ ಅನ್ಷು ಬಾಲಾ ಇಂದಿರಾಪುರದ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸುಮಿತ್ ಕುಮಾರ್ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೆ, ಬೆಂಗಳೂರಿನಲ್ಲಿಯೇ ಇದ್ದ ತನ್ನ ಸೋದರ ಮನೆಯಲ್ಲಿ ಉಳಿದುಕೊಂಡಿದ್ದ. ಆದರೆ, ಕಳೆದ ಡಿಸೆಂಬರ್ ನಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ.2011ರಲ್ಲಿ ಸುಮಿತ್ ಅನ್ಷುಬಾಲಾ ಅವರನ್ನು ವಿವಾಹವಾಗಿದ್ದ. ಇವರಿಗೆ ಇಬ್ಬರು ಗಂಡು, ಒಬ್ಬಳು ಹೆಣ್ಣು ಮಗಳಿದ್ದರು.
ಫ್ಲಾಟ್ನ ಎರಡನೆ ಅಂತಸ್ತಿನಲ್ಲಿ ವಾಸವಿದ್ದ ಸುಮಿತ್ ಕುಮಾರ್ ಶನಿವಾರ ರಾತ್ರಿ 11.30 ರ ಸಮಯದಲ್ಲಿ ಸಿಗರೇಟು ಸೇದುತ್ತಾ ಬಾಲ್ಕನಿಯಲ್ಲಿ ನಿಂತಿದ್ದ. ಬೆಳಗಿನ ಜಾವ 3ಗಂಟೆಯ ಸಮಯದಲ್ಲಿ ಆತ ಮುಖ್ಯದ್ವಾರದಿಂದ ನಡೆದುಹೋಗುತ್ತಿದ್ದುದನ್ನು ತಾನು ನೋಡಿದ್ದಾಗಿ ಫ್ಲಾಟ್ನ ಕಾವಲುಗಾರ ಪೊಲೀಸರಿಗೆ ತಿಳಿಸಿದ್ದಾನೆ.
ಪ್ರಾಥಮಿಕ ಮಾಹಿತಿಯಂತೆ,ಬೆಂಗಳೂರಿನ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ. ಅಲ್ಲದೆ, ಆತನ ಜೊತೆ ತಂದೆತಾಯಿ ಕೂಡ ವಾಸವಿದ್ದರು. ಇವರು ಒಂದು ವಾರದ ಹಿಂದೆ ಸಂಬಂಧಿಕರ ಮದುವೆಗೆಂದು ಹೊರ ಊರಿಗೆ ತೆರಳಿದ್ದರು. ಹಾಗಾಗಿ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳ ಜೊತೆ ಫ್ಲಾಟ್ ಒಂದರಲ್ಲಿವಾಸವಿದ್ದ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುವ ಮುನ್ನ ದೆಹಲಿಯ ಗುರುಗ್ರಾಮ್, ನೊಯ್ಡಾದಲ್ಲಿನ ಸಾಫ್ಟ್ವೇರ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಡಿಸೆಂಬರ್ನಲ್ಲಿ ಘಾಜಿಯಾಬಾದ್ಗೆ ಬಂದ. ಈ ವಿಷಯ ಸಂಬಂಧಿಕರಿಗೆ ಗೊತ್ತಿರಲಿಲ್ಲ. ಕಳೆದ ಶುಕ್ರವಾರ ಮನೆಗೆ ಹೋಗಿದ್ದಾಗ ಆತ ಸತತವಾಗಿ ಸಿಗರೇಟು ಸೇದುತ್ತಿದ್ದ. ಇದನ್ನು ವಿಚಾರಿಸಿದಾಗ ಸಾಕಷ್ಟು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದು ಗೊತ್ತಾಯಿತು. ಅಲ್ಲದೆ, ಆತನ ನಡವಳಿಕೆಯಲ್ಲೂ ಕೂಡ ಸಾಕಷ್ಟು ಬದಲಾವಣೆಯಾಗಿತ್ತು ಎಂದು ಅನ್ಷುಬಾಲಾ ಅವರ ಸೋದರ ಪಂಕಜ್ ಸಿಂಗ್ ತಿಳಿಸಿದ್ದಾರೆ.
ವಿಡಿಯೋದಲ್ಲಿ ಸ್ಥಳೀಯ ಔಷಧ ಅಂಗಡಿಯೊಂದರ ಮಾಲೀಕನ ವಿರುದ್ಧ ದೂರಿದ್ದಾನೆ. ಅಲ್ಲದೆ, ಅಂಗಡಿಯ ಮಾಲೀಕನಿಗೆ ಆತ ಒಂದು ಲಕ್ಷ ರುಪಾಯಿ ಕೊಡಬೇಕಾಗಿದೆ ಎಂದು ಹೇಳಿದ್ದಾರೆ.
ಈತನ ವಿರುದ್ಧ ಐಪಿಸಿ ಸೆಕ್ಷನ್ 302ರ ಪ್ರಕಾರ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆತನ ಪತ್ತೆಗಾಗಿ ವಿಶೇಷ ತಂಡ ರಚಿಸಿರುವುದಾಗಿ ಎಸ್ಪಿ ಶ್ಲೋಕಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.