ನವದೆಹಲಿ: ‘ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿಯನ್ನು ಯಾರೂ ನಕಲಿ ಎನ್ಕೌಂಟರ್ನಲ್ಲಿ ಕೊಂದಿಲ್ಲ. ಅವರು ಸಹಜವಾಗಿ ಸಾವನ್ನಪ್ಪಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
13 ವರ್ಷಗಳ ಹಿಂದಿನ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಮುಂಬೈ ಸಿಬಿಐ ನ್ಯಾಯಾಲಯ ನೀಡಿದ ಆದೇಶಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
‘ಹರೇನ್ ಪಾಂಡ್ಯಾ, ತುಳಸಿರಾಮ್ ಪ್ರಜಾಪತಿ, ನ್ಯಾಯಮೂರ್ತಿ ಲೋಯಾ, ಪ್ರಕಾಶ್ ತೊಂಬ್ರೆ, ಶ್ರೀಕಾಂತ್ ಖಾಂಡಲ್ಕರ್, ಕೌಸರ್ ಬಿ ಮತ್ತು ಸೊಹ್ರಾಬುದ್ದೀನ್ ಅವರನ್ನು ಯಾರೂ ಕೊಂದಿಲ್ಲ. ಅವರು ಸಹಜ ಸಾವನ್ನಪ್ಪಿದ್ದಾರೆ’ ಎಂದು ರಾಹುಲ್ ಶನಿವಾರ ಟ್ವೀಟ್ ಮಾಡಿದ್ದಾರೆ.
‘ಆರೋಪಿಗಳ ಖುಲಾಸೆಗೆ ಸಿಬಿಐ ಬಹಿರಂಗವಾಗಿ ನೆರವು ನೀಡಿದೆ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಸೊಹ್ರಾಬ್ ಪ್ರಕರಣದ ನ್ಯಾಯವಿಧಾನ ವ್ಯವಸ್ಥೆಗೆ ಒಂದು ಸಲಾಂ ಮತ್ತು ಬಹಿರಂಗವಾಗಿ ಆರೋಪಿಗಳ ನೆರವಿಗೆ ನಿಂತ ಸಿಬಿಐಗೆ ನಾವು ಧನ್ಯವಾದ ಹೇಳಲೇ ಬೇಕು’ ಎಂದು ಸಿಬಲ್ ಹೇಳಿದ್ದಾರೆ.