ಬ್ಯಾಡಗಿ: ನಿತ್ಯ ಚರಂಡಿಯ ದುರ್ನಾತ, ಸಂಜೆಯಾಗುತ್ತಿದ್ದಂತೆಯೇ ಜೇನು ಹಿಂಡಿನಂತೆ ಮುತ್ತಿಕೊಳ್ಳುವ ಸೊಳ್ಳೆಗಳು, ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ...ಇದು ಪಟ್ಟಣದ ಗುಮ್ಮನಹಳ್ಳಿ ರಸ್ತೆ ಬದಿಯ ನಿವಾಸಿಗಳು ನಿತ್ಯ ಅನುಭವಿಸುತ್ತಿರುವ ಸಂಕಷ್ಟಗಳು. ಈ ರಸ್ತೆ ಬದಿಯಲ್ಲಿ ಅಪೂರ್ಣಗೊಂಡ ಚರಂಡಿಯ ಕೊಳಚೆ ನೀರು ಹೊಂಡದ ರೀತಿಯಲ್ಲಿ ನಿಂತುಕೊಂಡಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ, ಸೊಳ್ಳೆಗಳ ಹಾವಳಿ ಮತ್ತು ದುರ್ನಾತ ಹೆಚ್ಚಾಗಿದೆ.
‘ಈ ಸಮಸ್ಯೆ ಕುರಿತು ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ದೂರುತ್ತಿದ್ದಾರೆ.
‘ಮಳೆಗಾಲ ಪ್ರಾರಂಭವಾಗುವ ಮೊದಲೇ ಈ ಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡದಿದ್ದರೆ, ಸ್ಥಳೀಯರೆಲ್ಲ ಪುರಸಭೆ ಎದುರು ಪ್ರತಿಭಟನೆ ಮಾಡಲು ಮುಂದಾಬೇಕಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಕಲ್ಲಪ್ಪ ಗೂರಮ್ಮನವರ ತಿಳಿಸಿದರು.
‘ಪಟ್ಟಣದ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಹರಿದು ಬಂದಿದೆ ಎಂದು ಶಾಸಕರು ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಆದರೆ, ಆ ಹಣ ಎಲ್ಲಿಗೆ ಹೋಯಿತು’ ಎಂದು ’ಪ್ರಶ್ನಿಸಿದರು.
‘ಚರಂಡಿಯ ದುರ್ನಾತದಿಂದ ಸುತ್ತಲಿನ ಕಾರ್ಸ್ಟ್ಯಾಂಡ್, ಕಾಂಗ್ರೆಸ್ ಕಚೇರಿ, ಪಂಪ್ಹೌಸ್, ಉಜನಿಯವರ ಓಣಿಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವುದು ನಿವಾರ್ಯವಾಗಿದೆ ಎಂದು ಸ್ಥಳೀಯ ನಿವಾಸಿ ರಮೇಶ ಹುಣಸಿಮರದ ದೂರಿದರು.
‘ಸುತ್ತಮುತ್ತಲಿನ ನಿವಾಸಿಗಳಲ್ಲಿ ಈ ಚರಂಡಿ ದುರ್ನಾತ ಹಾಗೂ ಸೊಳ್ಳೆಗಳ ಹಾವಳಿಯಿಂದ ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಆದರೆ, ಪುರಸಭೆಯಿಂದ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಬಸವರಾಜ ದೂರಿದರು.
‘2018–19ನೇ ಸಾಲಿನಲ್ಲಿ ಪುರಸಭೆ ಕ್ರಿಯಾಯೋಜನೆಯಲ್ಲಿ ಪಟ್ಟಣದ ಬೀರೇಶ್ವರ ದೇವಸ್ಥಾನದ ಎದುರಿನ ಚರಂಡಿಗೆ ಈ ಚಂಡಿಯನ್ನು ಸೇರಿಸುವಂತೆ ಯೋಜನೆ ರೂಪಿಸಲಾಗಿದೆ. ಚುನಾವಣೆ ಬಳಿಕ ಕೆಲಸವನ್ನು ಆರಂಭಿಸಲಾಗುವುದು’ ಎಂದು 8ನೇ ವಾರ್ಡ್ ಸದಸ್ಯ ನಜೀರ್ ಅಹಮ್ಮದ ಶೇಖ್ ‘ಪ್ರಜಾವಾಣಿ’ಗೆ ತಿಳಿಸಿದರು.
**
ಪಟ್ಟಣದಲ್ಲಿ ಒಟ್ಟು 51 ಪೌರಕಾರ್ಮಿಕರಿದ್ದು, 15 ಮಹಿಳೆಯರು ನಿತ್ಯ ಮನೆಮನೆಗೆ ಹೋಗಿ ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಅವರಿಗೆ ಗುತ್ತಿಗೆ ಸಂಸ್ಥೆಯ ಮೂಲಕ ತಿಂಗಳಿಗೆ ತಲಾ ₹5 ಸಾವಿರ ಗೌರವಧನ ನೀಡಲಾಗುತ್ತಿದೆ – ರವಿ ಕೀರ್ತಿ, ಆರೋಗ್ಯ ಸಿಬ್ಬಂದಿ, ಪುರಸಭೆ.
**
ಪ್ರಮೀಳಾ ಹುನಗುಂದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.