ನವದೆಹಲಿ: ‘ಒಂದು ದೇಶ, ಒಂದು ಚುನಾವಣೆ’ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕರೆದಿರುವ ಸಭೆಯಲ್ಲಿ ಪಕ್ಷದ ಕಾರ್ಯತಂತ್ರ ಏನಾಗಿರಬೇಕು ಎಂಬುದರ ಕುರಿತು ಕಾಂಗ್ರೆಸ್ನ ಪ್ರಮುಖ ನಾಯಕರು ಮಂಗಳವಾರ ಚರ್ಚಿಸಿದರು.
ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಎ.ಕೆ. ಆ್ಯಂಟನಿ, ಗುಲಾಂನಬಿ ಆಜಾದ್, ಆನಂದ್ ಶರ್ಮಾ, ಜೈರಾಮ್ ರಮೇಶ್, ಕೆ. ಸುರೇಶ್, ಅಧೀರ್ ರಂಜನ್ ಚೌಧರಿ ಉಪಸ್ಥಿತರಿದ್ದರು.
ಚುನಾವಣಾ ಸುಧಾರಣೆ, 2022ಕ್ಕೆ ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆ, ಮಹಾತ್ಮಾ ಗಾಂಧಿ ಅವರು 150ನೇ ಜನ್ಮದಿನಾಚರಣೆ ವಿಷಯಗಳ ಕುರಿತು ಚರ್ಚಿಸಲು ಪ್ರಧಾನಿ ಸಭೆ ಕರೆದಿದ್ದಾರೆ. ಜೂನ್ 20ರಂದು ಎಲ್ಲ ಸಂಸದರಿಗೆ ಔತಣಕೂಟ ಏರ್ಪಡಿಸಲಾಗಿದೆ.
ಸೋನಿಯಾ ಗಾಂಧಿ ನೇತೃತ್ವದಲ್ಲಿ ಯುಪಿಎ ಸಭೆ ನಡೆಸಿ, ಇದೇ ವಿಚಾರವಾಗಿ ಚರ್ಚಿಸಲಾಯಿತು. ಮೋದಿ ನೇತೃತ್ವದ ಸಭೆಯಲ್ಲಿ ಭಾಗಿಯಾಗಬೇಕೆ, ಬೇಡವೇ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿಲ್ಲ. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸೋನಿಯಾ ಗಾಂಧಿ, ‘ಈ ವಿಚಾರ ನಿಮಗೆ ಬುಧವಾರ ತಿಳಿಯಲಿದೆ’ ಎಂದರು.
ಸಭೆಗೆ ಬರುವುದಿಲ್ಲ–ಮಮತಾ: ಮೋದಿ ಕರೆದಿರುವ ಸರ್ವಪಕ್ಷಗಳ ಮುಖ್ಯಸ್ಥರ ಸಭೆಗೆ ಹಾಜರಾಗದಿರಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ.