ನವದೆಹಲಿ: ತೈಲ ಬೆಲೆ ಏರಿಕೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ವ್ಯಾಪಿಸಿರುವ ಈ ಸಂಕಷ್ಟದ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಸರ್ಕಾರದ ನಿರ್ಧಾರ ವಿವೇಕಶೂನ್ಯವಾದುದು ಎಂದು ಅವರು ಆರೋಪಿಸಿದ್ದಾರೆ.
ದೇಶದ ಜನರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗ, ಸರ್ಕಾರವು ತೈಲೋತ್ಪನ್ನಗಳ ಬೆಲೆ ಏರಿಸಿ, ಲಾಭ ಮಾಡಿಕೊಳ್ಳಬಾರದು ಎಂದಿದ್ದಾರೆ. ಡೀಸೆಲ್, ಪೆಟ್ರೋಲ್ ಬೆಲೆಯು ಸತತ 10 ದಿನಗಳ ಕಾಲ ಏರಿಕೆ ಕಂಡಿದೆ.
‘ಮಾರ್ಚ್ ತಿಂಗಳಿನಿಂದ ಆರಂಭಿಸಿ, ಕನಿಷ್ಠ ಹತ್ತು ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದರಿಂದ ಬೇಸರವಾಗಿದೆ. ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹2.6 ಲಕ್ಷ ಕೋಟಿ ಹರಿದುಬಂದಿದೆ’ ಎಂದು ಸೋನಿಯಾ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ದರ ಏರಿಕೆ ನಿರ್ಧಾರ ವಾಪಸ್ ಪಡೆದು, ಲಾಭವನ್ನು ನೇರವಾಗಿ ಜನರಿಗೆ ವರ್ಗಾಯಿಸಬೇಕು. ಜನರು ಸಬಲೀಕರಣ ಹೊಂದಬೇಕು ಎಂದು ನೀವು ಬಯಸುವುದಾದರೆ, ಅವರ ಮೇಲೆ ಆರ್ಥಿಕ ಹೊರೆ ಹೇರಬಾರದು’ ಎಂದು ಅವರು ಸಲಹೆ ನೀಡಿದ್ದಾರೆ.