ಬೆಂಗಳೂರು: ‘ಗಣ್ಯರೊಬ್ಬರು ಇತ್ತೀಚೆಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿದ್ದಕ್ಕೆ ಸಂಬಂಧಿಸಿದಂತೆ ₹ 13 ಲಕ್ಷ ಬಿಲ್ನ ಕಡತ ನನ್ನ ಬಳಿ ಬಂದಿತ್ತು. ಇಂತಹ ದುಬಾರಿ ಪ್ರಯಾಣ ಅಗತ್ಯವೇ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಬುಧವಾರ ರೈತರ ಸಭೆಯಲ್ಲಿ ಮಾತನಾಡಿದ ಅವರು, ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡಿರುವ ಸರ್ಕಾರದ ಗಣ್ಯರು ಯಾರು ಎಂಬ ಗುಟ್ಟನ್ನು ಬಿಟ್ಟುಕೊಡಲಿಲ್ಲ.
‘ನಾನು ಸಾಮಾನ್ಯ ಜನ ಸಂಚರಿಸುವ ವಿಮಾನದಲ್ಲಿಯೇ ಇತ್ತೀಚೆಗೆ ದೆಹಲಿಗೆ ಹೋಗಿದ್ದೆ. ₹ 75 ಸಾವಿರ ವೆಚ್ಚವಾಯಿತು. ವಿಶೇಷ ವಿಮಾನ ಮಾಡಿಕೊಂಡು ಹೋಗಿದ್ದರೆ, ₹ 38 ಲಕ್ಷ ಆಗುತ್ತಿತ್ತು’ ಎಂದು ಕುಮಾರಸ್ವಾಮಿ ಹೇಳಿದರು.
‘ಈ ರೀತಿ ಸಣ್ಣ ಸಣ್ಣ ವಿಚಾರದಲ್ಲೂ ನಾನು ಸರ್ಕಾರದ ಹಣ ಉಳಿತಾಯ ಮಾಡಲು ಮುಂದಾಗಿದ್ದೇನೆ. ಬೊಕ್ಕಸದ ಹಣ ವೃಥಾ ಪೋಲು ಆಗಬಾರದು ಎಂಬುದಷ್ಟೇ ನನ್ನ ಉದ್ದೇಶ’ ಎಂದರು.