ನವದೆಹಲಿ: ಯೂರಿಯಾಯೇತರ ರಸಗೊಬ್ಬರಗಳನ್ನು ಹೆಚ್ಚು ಬಳಸುವಂತೆ ರೈತರನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರಸಗೊಬ್ಬರಗಳಿಗೆ ನೀಡುವ ಸಬ್ಸಿಡಿಯನ್ನು ಹೆಚ್ಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ರಾಷ್ಟ್ರದ ಬೊಕ್ಕಸಕ್ಕೆ ಈ ಆರ್ಥಿಕ ವರ್ಷ ₹ 22,875.50 ಕೋಟಿ ಹೊರೆ ಬೀಳಲಿದೆ.
ಸಾರಜನಕಕ್ಕೆ ನೀಡುವ ಸಬ್ಸಿಡಿಯನ್ನು ಪ್ರತಿ ಕೆ.ಜಿಗೆ ₹ 18.90 ನಿಗದಿಪಡಿಸಲಾಗಿದೆ. ರಂಜಕ– ₹ 15.11 (ಪ್ರತಿ ಕೆ.ಜಿಗೆ), ಪೊಟ್ಯಾಷ್– ₹ 11.12 ಹಾಗೂ ಪ್ರತಿ ಕೆ.ಜಿ ಗಂಧಕಕ್ಕೆ ₹ 3.56 ಸಬ್ಸಿಡಿ ನಿಗದಿ ಮಾಡಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.