ಬೆಂಗಳೂರು: ‘ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ದಾಖಲಾದ ಮಕ್ಕಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ತಿಳಿಸಿದರು.
ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಟಿಇ ಕಾಯ್ದೆಯಲ್ಲಿನ ಅನೇಕ ಅಂಶಗಳು ಜನರಿಗೆ ತಿಳಿದಿಲ್ಲ. ಶಿಕ್ಷಣ ಇಲಾಖೆಯೂ ಇದನ್ನು ಮರೆಮಾಚುತ್ತಾ ಬಂದಿದೆ. ಇದು ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಅನುಕೂಲವಾಗಿದೆ’ ಎಂದರು.
‘ಶೇ 25ರಷ್ಟು ಮೀಸಲಾತಿಯಲ್ಲಿ ದಾಖಲಾಗಿರುವ ಮಕ್ಕಳಿಗೆ ದೇಣಿಗೆ ವೆಚ್ಚ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಶಾಲೆಯೇ ಒದಗಿಸಬೇಕು ಎಂದು ಕಾಯ್ದೆಯ ನಿಯಮದಲ್ಲಿದೆ. ಇದನ್ನು ಉಲ್ಲಂಘಿಸುವ ಶಾಲೆಗಳ ಮೇಲೆ ಕಾನೂನು ಕ್ರಮಕೈಗೊಳ್ಳಬಹುದು’ ಎಂದು ವಿವರಿಸಿದರು.
‘ಶಾಲೆಗಳಲ್ಲಿ ಪುಸ್ತಕಗಳನ್ನು ಮಾರಾಟಕ್ಕೆ ನಿಷೇಧ ಹೇರಿದ ನಂತರ, ಆಡಳಿತ ಮಂಡಳಿಯವರು ಅಂಗಡಿಗಳಿಗೆ ಹೊರಗುತ್ತಿಗೆ ನೀಡುತ್ತಿದ್ದಾರೆ. ಅಲ್ಲಿಂದಲೇ ಪುಸ್ತಕ ಹಾಗೂ ಸಮವಸ್ತ್ರ ಖರೀದಿಸಬೇಕೆಂದು ತಾಕೀತು ಮಾಡುತ್ತಿದ್ದಾರೆ. ಇದೂ ಕಾನೂನಿಗೆ ವಿರುದ್ಧ. ಪೋಷಕರು ಈ ಬಗ್ಗೆ ಜಾಗೃತರಾಗಬೇಕು’ ಎಂದು ಕೋರಿದರು.
‘ಮೂರು ತಿಂಗಳಲ್ಲಿ ಆಯೋಗಕ್ಕೆ 40 ದೂರುಗಳು ಬಂದಿವೆ. ಸಂಬಂಧಪಟ್ಟ ಶಾಲೆಗೆ ನೋಟಿಸ್ ನೀಡಲಾಗಿದೆ. ಇಲಾಖೆಯ ಕೆಲವು ಅಧಿಕಾರಿಗಳು ಶಾಲೆಗಳ ಪರವಾಗಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದೇವೆ’ ಎಂದರು.
‘ಅನುದಾನರಹಿತ ಶಾಲೆಗಳು ಹಣಕ್ಕಾಗಿ ಪೀಡಿಸಿದರೆ, ಹೆದರಿ ಅವರಿಗೆ ಮಣಿಯಬಾರದು. ಬಿಇಒ ಕಚೇರಿಗೆ ದೂರು ನೀಡಬೇಕು. ಆಗಲೂ ಸಮಸ್ಯೆ ಪರಿಹಾರವಾಗದಿದ್ದರೆ, ಆಯೋಗ ನಿಮ್ಮ ನೆರವಿಗೆ ಬರುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.