ನವದೆಹಲಿ: ನಿರ್ಭಯಾ ರೀತಿಯ ಅತ್ಯಾಚಾರ ಪ್ರಕರಣದಲ್ಲಿ ಏಳು ಮಂದಿಗೆ ನೀಡಿದ್ದ ಮರಣದಂಡನೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ವಿಭಾ ದತ್ತ ಮಖಿಜಾ ಅವರು ಹಾಜರಾಗಿದ್ದರು.
2015ರಫೆಬ್ರುವರಿ 1ರಂದು ರೋಹ್ಟಕ್ನಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆ ಮಾಡಲಾಗಿತ್ತು.
ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಕಾಯಂಗೊಳಿಸಿದ್ದ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ದೋಷಿಗಳಾದ ಪದಮ್ ಹಾಗೂ ಇತರರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರ ಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು.
ಪದಮ್, ಪವನ್, ಸರ್ವಾರ್, ಮನ್ಬೀರ್, ರಾಜೇಶ್, ಸುನಿಲ್, ಸುನಿಲ್ ಅಲಿಯಾಸ್ ಶೀಲಾ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ ಸಾಬೀತಾಗಿತ್ತು.
ರೋಹ್ಟಕ್ ಹೊರವಲಯದಲ್ಲಿ ತನ್ನ ಅಕ್ಕನ ಜೊತೆ ವಾಸವಿದ್ದ ಮಾನಸಿಕ ಅಸ್ವಸ್ಥ ಯುವತಿ, ಮನೆಯಿಂದ ಹೊರಬಂದು ಒಬ್ಬಳೆ ನಡೆದು ಹೋಗುತ್ತಿದ್ದಳು. ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಆಕೆಯನ್ನು ಬಲವಂತವಾಗಿ ಬೈಕ್ನಲ್ಲಿ ಕರೆದೊಯ್ದಿತ್ತು. ಸಾಮೂಹಿಕ ಅತ್ಯಾಚಾರ ನಡೆಸಿ, ಕೊನೆಗೆ ಹತ್ಯೆಗೈದಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮೃತದೇಹದಿಂದ ಕತ್ತರಿ ಹಾಗೂ ಕಲ್ಲುಗಳನ್ನು ವೈದ್ಯರು ಹೊರತೆಗೆದಿದ್ದರು. ಇದೊಂದು ಹೀನ ಕೃತ್ಯ ಎಂದು ಕೋರ್ಟ್ ಕರೆದಿತ್ತು.