ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ದಾಳಿ:ಯೋಧರಿಗೆ ಮೋದಿ ಹೇಳಿದ್ದು, 'ಸೂರ್ಯೋದಯಕ್ಕೆ ಮುನ್ನ ವಾಪಸ್ ಬನ್ನಿ'

Last Updated 1 ಜನವರಿ 2019, 14:01 IST
ಅಕ್ಷರ ಗಾತ್ರ

ನವದೆಹಲಿ: 'ಕಾರ್ಯಾಚರಣೆಯಲ್ಲಿ ಗೆಲುವು ಸಾಧಿಸಿದರೂ, ಸೋತರೂ ಸೂರ್ಯೋದಯದ ಮುನ್ನ ವಾಪಸ್ ಬನ್ನಿ' ನಿರ್ದಿಷ್ಟ ದಾಳಿ ಮುನ್ನ ಭಾರತೀಯ ಸೇನೆಯ ವಿಶೇಷ ಪಡೆಯ ಕಮಾಂಡೊಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂದೇಶ ಇದು.

2016 ಸಪ್ಟೆಂಬರ್ 28ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿತ್ತು.

ಎಎನ್‍ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಭಾರತೀಯ ಸೇನಾ ಪಡೆಯ ಸುರಕ್ಷೆ ಮತ್ತು ರಕ್ಷಣೆಯನ್ನು ಪರಿಗಣಿಸಿ ನಿರ್ದಿಷ್ಟ ದಾಳಿ ನಡೆಸುವ ದಿನವನ್ನು ಎರಡು ಬಾರಿ ಬದಲಿಸಿದ್ದೆವು ಎಂದಿದ್ದಾರೆ.

ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ಮಾಡಿ 20 ಯೋಧರನ್ನು ಹತೈಗೆದಿದ್ದರು. ಈ ದಾಳಿ ನಡೆದ ಕೆಲವೇ ದಿನಗಳಲ್ಲಿ ಭಾರತ ಗಡಿ ನಿಯಂತ್ರಣಾ ರೇಖೆಯಾಚೆ ನಿರ್ದಿಷ್ಟ ದಾಳಿ ನಡೆಸಿತ್ತು.

ಉರಿ ದಾಳಿಯಲ್ಲಿ ಭಾರತದ ಯೋಧರನ್ನು ಸಜೀವ ದಹನ ಮಾಡಿದ ಉಗ್ರರ ಕೃತ್ಯಕ್ಕೆ ತಿರುಗೇಟು ನೀಡುವ ಕೋಪ ನನ್ನಲ್ಲಿ ಮತ್ತು ಸೇನೆಯಲ್ಲಿತ್ತು.ಆದ್ದರಿಂದ ನಿರ್ದಿಷ್ಟ ದಾಳಿ ನಡೆಸುವ ತೀರ್ಮಾನ ಕೈಗೊಂಡೆವು.
ಈ ಕಾರ್ಯಾಚರಣೆಯಲ್ಲಿ ನೀವು ಯಶಸ್ವಿಯಾದರೂ ಇಲ್ಲದೇ ಇದ್ದರೂ ಅದರ ಬಗ್ಗೆ ಯೋಚಿಸದೆ ಸೂರ್ಯೋದಯಕ್ಕೆ ಮುನ್ನ ವಾಪಸ್ ಬನ್ನಿ.ಈ ಕಾರ್ಯಾಚರಣೆಯನ್ನು ವಿಸ್ತರಿಸಬೇಡಿ ಎಂದು ನಾನು ಸೇನೆಯ ಕಮಾಂಡೊಗಳಿಗೆ ಹೇಳಿದ್ದೆ. ಇದನ್ನು ಹೇಳುವಾಗ ಮೋದಿ ಕೊಂಚ ಭಾವುಕರಾಗಿದ್ದರು.

ಈ ಕಾರ್ಯಾಚರಣೆಯಲ್ಲಿ ನಮ್ಮ ಯಾವುದೇ ಯೋಧರು ಸಾವಿಗೀಡಾಗುವುದನ್ನು ನನಗೆ ನೋಡಲು ಸಾಧ್ಯವಿಲ್ಲ. ಹಾಗಾಗಿಯೇ ಕಾರ್ಯಾಚರಣೆ ಯಶಸ್ವಿ ಆಗಿದೇ ಇದ್ದರೂ ಸೂರ್ಯೋದಯಕ್ಕೆ ಮುನ್ನ ವಾಪಸ್ ಬನ್ನಿ ಎಂದು ಹೇಳಿದ್ದು.ನಾನು ಇಡೀ ರಾತ್ರಿ ಆ ಕಾರ್ಯಾಚರಣೆಯ ಕ್ಷಣ ಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದೆ.

ಅದೊಂದು (ನಿರ್ದಿಷ್ಟ ದಾಳಿ)ಅಪಾಯಕಾರಿ ಕೆಲಸ ಎಂದು ನನಗೆ ಗೊತ್ತಿತ್ತು.ನಾನು ಯಾವುದೇ ರಾಜಕೀಯ ಅಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.ನಮ್ಮ ಯೋಧರ ಸುರಕ್ಷೆ ಅಷ್ಟೇ ನನಗೆ ಮುಖ್ಯವಾದುದು.ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಡಲು ಸಿದ್ಧರಾದ ಕಮಾಂಡೊಗಳಿಗೆ ಯಾವುದೇ ರೀತಿಯ ಹಾನಿಯುಂಟಾಗಲು ನಾನು ಬಯಸಿಲ್ಲ ಎಂದಿದ್ದಾರೆ ಮೋದಿ.

ಸುಮಾರು 1 ಗಂಟೆಗಳ ಕಾಲ ನನಗೆ ಮಾಹಿತಿ ಬರುವುದು ನಿಂತು ಹೋಯಿತುಯನನ್ನ ಆತಂಕ ಹೆಚ್ಚಾಯಿತು, ಸೂರ್ಯೋದಯ ಆಗಿ ಒಂದು ಗಂಟೆ ಆಗಿತ್ತು. ಆ ಹೊತ್ತು ತುಂಬಾ ಕಠಿಣ ಕ್ಷಣವಾಗಿತ್ತು.ಅಷ್ಟೊತ್ತಿಗೆ ಸಂದೇಶ ಬಂತು. ಸೇನಾಪಡೆ ಇಲ್ಲಿಯವರೆಗೆ ವಾಪಸ್ ಬಂದಿಲ್ಲ ಆದರೆ ಎರಡು, ಮೂರು ಘಟಕಗಳು ಸುರಕ್ಷಿತ ವಲಯಕ್ಕೆ ತಲುಪಿದೆ.ಹಾಗಾಗಿ ಆತಂಕ ಬೇಡ ಎಂದಾಗಿತ್ತು ಆ ಸಂದೇಶ. ಆದರೆ ಕೊನೆಯ ವ್ಯಕ್ತಿ ಸುರಕ್ಷಿತವಾಗಿ ತಲುಪುವವರೆಗೆ ನನಗೆ ಸಮಾಧಾನ ಆಗಲ್ಲ ಎಂದು ನಾನು ಹೇಳಿದ್ದೆ.

ನಿರ್ದಿಷ್ಟ ದಾಳಿ ಬಗ್ಗೆ ದೇಶದ ಜನರಿಗೆ ತಿಳಿಸುವ ಮುನ್ನವೇ ನಾವು ಪಾಕಿಸ್ತಾನಕ್ಕೆ ತಿಳಿಸಿದ್ದೆವು. ಆದಾಗ್ಯೂ, ದೇಶದ ಜನರೇ ನಿರ್ದಿಷ್ಟ ದಾಳಿ ಬಗ್ಗೆ ಸಂದೇಹ ವ್ಯಕ್ತ ಪಡಿಸಿದ್ದು ದುರಾದೃಷ್ಟ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT