ನವದೆಹಲಿ: ಬಿಜು ಜನತಾದಳದ (ಬಿಜೆಡಿ) ಹಿರಿಯ ನಾಯಕ ಮತ್ತು ಸಂಸದ ತಥಾಗತ್ ಸತ್ಪತಿ ಅವರು ಸಕ್ರಿಯ ರಾಜಕಾರಣ ತೊರೆಯುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.
ಒಡಿಶಾದ ಧೆಂಕನಾಲ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ತಥಾಗತ್ ಈ ಬಾರಿ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.
ಒಡಿಯಾ ಭಾಷೆಯಲ್ಲಿ ‘ಧರಿತ್ರಿ’ ಮತ್ತು ಇಂಗ್ಲಿಷ್ ದೈನಿಕ ‘ಒಡಿಶಾ ಪೋಸ್ಟ್’ ಪತ್ರಿಕೆಗಳನ್ನು ಮುನ್ನಡೆಸುತ್ತಿರುವ ಅವರು ಮತ್ತೆ ಪೂರ್ಣ ಪ್ರಮಾಣದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.
‘ಬಿಜೆಪಿ ಮುಖ್ಯಸ್ಥ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಜತೆ ಮನಸ್ತಾಪ ಇಲ್ಲ. ಪಕ್ಷದ ಟಿಕೆಟ್ ದೊರೆಯುವುದು ಕೂಡ ಕಷ್ಟ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ನಾನು ರಾಜಕೀಯ ತೊರೆಯುವುದು ನನ್ನ ಮಗನ ಒತ್ತಾಸೆಯಾಗಿತ್ತು. ಕೊನೆಗೂ ಮಗನ ಆಸೆ ಗೆದ್ದಿದೆ. ಕುಟುಂಬದ ಜತೆ ಹೆಚ್ಚು ಹೊತ್ತು ಕಾಲ ಕಳೆಯುವೆ ಮತ್ತು ಪತ್ರಿಕೆಗಳತ್ತ ಗಮನ ಹರಿಸುವೆ’ ಎಂದು ತಥಾಗತ್ ಹೇಳಿದ್ದಾರೆ.
ಒಡಿಶಾದ ಮಾಜಿ ಮುಖ್ಯಮಂತ್ರಿ ನಂದಿನಿ ಸತ್ಪತಿ ಮತ್ತು ಮಾಜಿ ಸಂಸದ ದೇವೇಂದ್ರ ಸತ್ಪತಿ ದಂಪತಿ ಪುತ್ರನಾಗಿರುವ ತಥಾಗತ್ ಅವರು ಬಿಜೆಪಿಯ ಕಡು ವಿರೋಧಿಯಾಗಿದ್ದರು.
ಬಿಜೆಡಿಯ ಮತ್ತೊಬ್ಬ ಸಂಸದ ಜೆ ಪಾಂಡಾ ಸೋಮವಾರ ಬಿಜೆಪಿ ಸೇರಿದ್ದಾರೆ.