ನವದೆಹಲಿ: ಸಂಸತ್ತಿಗೆ ಅಥವಾ ಶಾಸನ ಸಭೆಗೆ ಆಯ್ಕೆಯಾದ ಅಥವಾ ನೇಮಕಗೊಂಡ, ವಿಶ್ವವಿದ್ಯಾಲಯ ಅಥವಾ ಕಾಲೇಜುಗಳ ಉಪನ್ಯಾಸಕರು ಇಚ್ಛಿಸುವುದಾದರೆ ಉಪನ್ಯಾಸಕ ವೃತ್ತಿಯನ್ನು ಮುಂದುವರಿಸಬಹುದು ಅಥವಾ ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ.
ರಾಜ್ಯಸಭೆಯ ಸಮಿತಿಯು ಈ ಬಗ್ಗೆ ಯುಜಿಸಿಗೆ ಕೆಲವು ಸಲಹೆಗಳನ್ನು ನೀಡಿತ್ತು. ಕಳೆದ ವಾರ ನಡೆದ ಆಯೋಗದ ಸಭೆಯಲ್ಲಿ ಆ ಸಲಹೆಗಳನ್ನು ಒಪ್ಪಿಕೊಳ್ಳಲಾಗಿದೆ. ಶಾಸನ ರೂಪಿಸುವ ತಮ್ಮ ಕೆಲಸದ ಜೊತೆಯಲ್ಲೇ ವೃತ್ತಿಯನ್ನೂ ಮುಂದುವರಿಸಬೇಕು ಎಂದುಕೊಂಡಿರುವ ಅನೇಕ ಉಪನ್ಯಾಸಕರಲ್ಲಿ ಆಯೋಗದ ಈ ತೀರ್ಮಾನ ನೆಮ್ಮದಿ ಮೂಡಿಸಿದೆ.
ಸಂಸತ್ತು ಅಥವಾ ವಿಧಾನಸಭೆಯ ಅಧಿವೇಶನ ನಡೆಯುವಾಗ ಅಥವಾ ಸಂಸತ್ತು ಅಥವಾ ಶಾಸನಸಭೆಯ ಇತರ ಕೆಲಸಗಳಿಗಾಗಿ ಇಂಥ ಉಪನ್ಯಾಸಕರನ್ನು ‘ಕರ್ತವ್ಯದ ಮೇಲೆ’ ಕಳುಹಿಸಬೇಕು. ಇಂಥವರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸ ಮತ್ತು ಸಂಶೋಧನಾ ಕೆಲಸಗಳನ್ನು ಮಾಡಬಹುದೇ ವಿನಾ ಯಾವುದೇ ಆಡಳಿತಾತ್ಮಕ ಹುದ್ದೆ ಅಥವಾ ಜವಾಬ್ದಾರಿಗೆ ಅರ್ಹರಿರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.