ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ಬೆಂಬಲ

Last Updated 7 ಮೇ 2018, 11:24 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಂಗ್ರೆಸ್‌, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ 20 ನಗರಪಾಲಿಕೆ ಸದಸ್ಯರು, 10 ಮಂದಿ ಮಾಜಿ ಸದಸ್ಯರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆಗೆ ಬೆಂಬಲ ಘೋಷಿಸಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ತಿಳಿಸಿದರು.

ಸದಸ್ಯರ ಸಮ್ಮುಖದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ನಗರಪಾಲಿಕೆ ಸದಸ್ಯರು ಹಾಗೂ ಮುಖಂಡರು ಭಾಷೆ ಮತ್ತು ಪಕ್ಷವನ್ನು ಮೀರಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿರುವುದು ಬೆಳಗಾವಿಯ ರಾಜಕೀಯ ಇತಿಹಾಸದಲ್ಲಿಯೇ ಇದೇ ಮೊದಲು. ಇದೊಂದು ಐತಿಹಾಸಿಕ ಘಟನೆ’ ಎಂದು ಹೇಳಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ದೊರೆತರೂ ಕೆಲಸ ಮಾಡಲು ಆಗುತ್ತಿರಲಿಲ್ಲ. ಇದರಿಂದ ಅವರು ನೊಂದಿದ್ದಾರೆ. ಬೆಳಗಾವಿ ಉಳಿಸಿ–ಬೆಳಗಾವಿ ಬೆಳೆಸಿ ಎನ್ನುವ ಘೋಷಣೆಯೊಂದಿಗೆ ಒಂದಾಗಿ, ನಮ್ಮನ್ನು ಬೆಂಬಲಿಸುತ್ತಿದ್ದರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ ಬೇಕು ಎನ್ನುವುದನ್ನು ಅರಿತು ಕೈಜೋಡಿಸಿದ್ದಾರೆ. ಶಾಸಕನಾಗಿ ಆಯ್ಕೆಯಾದರೆ, ಪಾಲಿಕೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅನಿಲ ಬೆನಕೆ ಮಾತು ನೀಡಿದ್ದಾರೆ. ದಕ್ಷಿಣ ಕ್ಷೇತ್ರದ ನಗರಪಾಲಿಕೆ ಸದಸ್ಯರೂ ಶೀಘ್ರವೇ ಇಂಥದೊಂದು ಘೋಷಣೆ ಮಾಡುತ್ತಾರೆ’ ಎಂದರು.

ಮಾತೆ ಮಾತು ಕೇಳೋ ಎರಡು ಮನೆ ತೋರಿಸಿ:  ‘ಮಾತೆ ಮಹಾದೇವಿ ಅವರ ಮಾತು ಕೇಳುವ ಎರಡು ಮನೆ ಇಲ್ಲಿದ್ದರೆ ತೋರಿಸಿ. ಆಕೆ ಸ್ವಯಂ ಘೋಷಿತ ಗುರು. ಆಕೆಯನ್ನು ನಾವು ಒಪ್ಪಿಕೊಂಡೇ ಇಲ್ಲ. ಸಮಾಜ ಒಡೆಯುವವರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಪ್ರಭಾಕರ ಕೋರೆ ಏಕವಚನದಲ್ಲಿ  ಟೀಕಿಸಿದರು.

‘ನಮ್ಮ ಅಭ್ಯರ್ಥಿ ಅನಿಲ ಬೆನಕೆ ಮತ ಕೇಳುವ ಸಲುವಾಗಿ ಕಿರಣ ಠಾಕೂರ್‌ ಕಚೇರಿಗೆ ಹೋಗಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಶತ್ರು ಎದುರಾದರೂ ಮತ ಕೇಳುವುದರಲ್ಲಿ ತಪ್ಪಿಲ್ಲ’ ಎಂದು ಕೋರೆ ಸಮರ್ಥಿಸಿಕೊಂಡರು.

ಅಧಿಕಾರ ಕಳೆದುಕೊಂಡಿದ್ದೇವೆ: ‘ಎಂಇಎಸ್‌ ಮುಖಂಡ, ಮಾಜಿ ಉಪ ಮೇಯರ್‌ ನಾಗೇಶ ಮಂಡೋಳ್ಕರ್‌ ಮಾತನಾಡಿ, ‘ಬಿಜೆಪಿ ಬೆಂಬಲಿಸುತ್ತಿರುವವರಲ್ಲಿ 9 ಮಂದಿ ಎಂಇಎಸ್‌ನವರೇ ಇದ್ದೇವೆ. ಮೀನಾ ವಾಜ್‌, ಸಂಜೋತಾ, ಮಾಯಾ ಕಡೋಲ್ಕರ್, ಉಲಜಿ, ಚೋಪಡೆ, ಪುಂಡಲೀಕ ಬೆಂಬಲ ನೀಡುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಮಾತನಾಡಿ, ‘ಬೆಳಗಾವಿ ಉಳಿಯಬೇಕು ಹಾಗೂ ಬೆಳೆಯಬೇಕು, ನಗರದ ಜನರು ಶಾಂತಿಯಿಂದ ಇರಬೇಕು ಎನ್ನುವುದು ನಮ್ಮ ಕಾರ್ಯಸೂಚಿಯಾಗಿದೆ. ಹೀಗಾಗಿ, ಪಕ್ಷ, ಭಾಷೆ ತಾರತಮ್ಯವಿಲ್ಲದೆ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ. 10 ವರ್ಷಗಳಿಂದ ಶಾಸಕರಾಗಿದ್ದವರು ನಮ್ಮ ಅಧಿಕಾರವನ್ನು ಕಸಿದುಕೊಂಡಿದ್ದಾರೆ. ಪಾಲಿಕೆಗೆ ಬರುವ ಅನುದಾನವನ್ನು ಬಳಸಿಕೊಂಡು, ಕಾಮಗಾರಿ ನಡೆಸಿದ್ದಾರೆ. ಅವರು ಹೆಸರು ಮಾಡಿಕೊಳ್ಳುತ್ತಿದ್ದಾರೆ. ಮೇಯರ್‌ ಆದ ಮೇಲೆ ಇದು ನನಗೆ ಚೆನ್ನಾಗಿ ಅರಿವಿಗೆ ಬಂದಿದೆ’ ಎಂದು ಹೇಳಿದರು.

‘ಶಾಸಕರ ಮನೆಯಲ್ಲಿ ಯೋಜನೆ ಸಿದ್ಧವಾಗುತ್ತಿವೆ. ಅಧಿಕಾರಿಗಳಿಗೆ ಕರೆ ಮಾಡಿದರೆ, ಅವರು ಮೊಬೈಲನ್ನು ಶಾಸಕರಿಗೆ ಕೊಡುತ್ತಾರೆ. ಇದರಿಂದಾಗಿ, ನಮಗೆ ಬೆಲೆಯೇ ಇಲ್ಲದಂತಾಗಿದೆ’ ಎಂದು ದೂರಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್, ‘ವಿಭಜನೆ ವಿರೋಧಿ ನೀತಿ ನಮ್ಮದು’ ಎಂದರು.

ಸಂಸದ ಸುರೇಶ ಅಂಗಡಿ, ಅಭ್ಯರ್ಥಿ ಅನಿಲ ಬೆನಕೆ, ಮುಖಂಡರಾದ ರಾಜು ಚಿಕ್ಕನಗೌಡರ, ನಗರಪಾಲಿಕೆ ಸದಸ್ಯರಾದ ಸರಳಾ ಹೇರೇಕರ, ರಮೇಶ ಕಳಸಣ್ಣವರ, ರಮೇಶ ಸೊಂಟಕ್ಕಿ, ಸಂಜಯ ಸವ್ವಾಸೇರಿ, ದೀಪಕ ಜಮಖಂಡಿ, ಸತೀಶ ದೇವರಪಾಟೀಲ, ಶಾಂತಾ ಉಪ್ಪಾರ, ರವಿ ಧೋತ್ರೆ, ಶ್ರೇಯಾ, ಜ್ಯೋತಿ ಭಾವಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT