ಕಾಸರಗೋಡು: ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಕೇರಳದ ಮುಜರಾಯಿ ಸಚಿವ ಕಡಗಂಪಳ್ಳಿ ಸುರೇಂದ್ರನ್ ವಿರುದ್ಧ ಫೇಸ್ಬುಕ್ನಲ್ಲಿ ನಿಂದನಾತ್ಮಕ ಪೋಸ್ಟ್ ಪ್ರಕಟಿಸಿದ ಆರೋಪದಲ್ಲಿ ಇಲ್ಲಿನ ದೇವಾಲಯವೊಂದರ ಮುಖ್ಯ ಅರ್ಚಕರೊಬ್ಬರನ್ನು ಗುರುವಾರ ಅಮಾನತು ಮಾಡಲಾಗಿದೆ.
ಕಾಞಂಗಾಡು ಸಮೀಪದ ಮಡಿಯನ್ ಕೂಲೋಂ ಕ್ಷೇತ್ರಪಾಲಕ ದೇವಾಲಯದ ಮುಖ್ಯ ಅರ್ಚಕ ಟಿ. ಮಾಧವನ್ ನಂಬೂದಿರಿ ಅಮಾನತುಗೊಂಡವರು.
ಈ ದೇವಾಲಯವು ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿದ್ದು, ಮಂಡಳಿಯು ಬುಧವಾರ ಸಭೆ ನಡೆಸಿ ಅರ್ಚಕರ ವಿರುದ್ಧ ಕ್ರಮಕೈಗೊಳ್ಳಲು ತೀರ್ಮಾನಿಸಿತ್ತು.
‘ದೇವಾಲಯದ ಆನುವಂಶಿಕ ಧರ್ಮದರ್ಶಿಯಾಗಿರುವುದರಿಂದ ನನ್ನನ್ನು ಅಮಾನತು ಮಾಡಲು ಸಾಧ್ಯವಿಲ್ಲ’ ಎಂದು ಮಾಧವನ್ ನಂಬೂದಿರಿ ಹೇಳಿದ್ದಾರೆ.
ಶಬರಿಮಲೆ ದೇಗುಲಕ್ಕೆ ತೆರಳುವ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರನ್ನು ಪೊಲೀಸರು ಈಚೆಗೆ ಬಂಧಿಸಿದ್ದರು. ಇದನ್ನು ಖಂಡಿಸಿ ಮಾಧವನ್ ಅವರು ಮುಜರಾಯಿ ಸಚಿವರ ವಿರುದ್ಧ ಫೇಸ್ಬುಕ್ನಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿದ್ದರು.