ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ₹15 ಲಕ್ಷ ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಶುಕ್ರವಾರ ತಿಳಿಸಿದೆ.
ನಿಷೇಧಿತ ಲಷ್ಕರ್ ಎ ತಯಬಾ (ಎಲ್ಇಟಿ) ಸಂಘಟನೆಗೆ ನೆರವು ನೀಡಿರುವ ಆರೋಪದಲ್ಲಿ ₹7ಲಕ್ಷ ವಶಪಡಿಸಿಕೊಂಡ, 17 ವರ್ಷ ಹಿಂದಿನ ಪ್ರಕರಣ ಇದಾಗಿದೆ ಎಂದೂ ಹೇಳಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಅಡಿಯಲ್ಲಿ, ಮೊಹಮ್ಮದ್ ಆಯುಬ್ ಮಿರ್, ಬೆಚ್ ರಾಜ್ ಬೆಂಗಾನಿ ಮತ್ತು ಹರ್ಬನ್ಸ್ ಸಿಂಗ್ಗೆ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಿರ್ಗೆ ₹5ಲಕ್ಷ, ಬೆಂಗಾನಿಗೆ ₹7ಲಕ್ಷ ಹಾಗೂ ಹರ್ಬನ್ಸ್ಗೆ ₹3ಲಕ್ಷ ದಂಡ ವಿಧಿಸಲಾಗಿದೆ ಎಂದಿದ್ದಾರೆ.
ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಹರ್ಬನ್ಸ್ ಸಿಂಗ್ನಿಂದ ₹7ಲಕ್ಷ ಹವಾಲ ಹಣ ಪಡೆದುಕೊಂಡ ಆರೋಪದಲ್ಲಿ ಮಿರ್ನನ್ನು 2002 ಜುಲೈ 2ರಂದು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿತ್ತು. ಅನಂತರ ಪ್ರಕರಣವನ್ನು ಇ.ಡಿಗೆ ಹಸ್ತಾಂತರಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಬೇಕಾಗಿದ್ದ ಮಿರ್, ಎಲ್ಇಟಿಯ ಸಕ್ರಿಯ ಸದಸ್ಯನಾಗಿದ್ದ ಎಂದೂ ಆರೋಪಿಸಲಾಗಿತ್ತು.ಬೆಂಗಾನಿ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹರ್ಬನ್ಸ್, ಆತನ ಸೂಚನೆಯಂತೆ ಮಿರ್ಗೆ ಹಣ ತಲುಪಿಸಿದ್ದ.
ಬೆಂಗಾನಿ ಹವಾಲ ಹಣದ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.