ಕೊಯಮತ್ತೂರು/ನಾಗಪಟ್ಟಣ: ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಶಂಕೆಯ ಮೇಲೆರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್ಐಎ) ಅಧಿಕಾರಿಗಳು ಗುರುವಾರ ತಮಿಳುನಾಡಿನ ಕೊಯಮತ್ತೂರು ಮತ್ತು ನಾಗಪಟ್ಟಣ ಜಿಲ್ಲೆಗಳಲ್ಲಿ ಶೋಧ ನಡೆಸಿದ್ದಾರೆ.
ಕೊಯಮತ್ತೂರಿನಲ್ಲಿ ಇಬ್ಬರ ಮನೆಗಳ ಮೇಲೆ ಹಾಗೂ ನಾಗಪಟ್ಟಣದಲ್ಲಿ ಒಬ್ಬರ ಮನೆಗಳ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಶೋಧಿಸಿದ್ದಾರೆ. ಅಲ್ಲದೆ ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಶಂಕಿತರು ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ಉದ್ದೇಶದಿಂದ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು. ಅದಕ್ಕಾಗಿ ಹಣ ಸಂಗ್ರಹಿಸುವ ಮೂಲಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 21ರಂದು ಎನ್ಐಎ ಅಧಿಕಾರಿಗಳು ತಿರುನಲ್ವೇಲಿ ಜಿಲ್ಲೆಯಲ್ಲಿ ಒಬ್ಬ ಶಂಕಿತ ವ್ಯಕ್ತಿಯ ಮನೆಯ ಮೇಲೆ ಶೋಧ ನಡೆಸಿದ್ದರು. ಆಗಸ್ಟ್ 29ರಂದು ಕೊಯಮತ್ತೂರಿನ ವಿವಿಧೆಡೆ, ಜುಲೈ ಆರಂಭದಲ್ಲಿ ತಮಿಳುನಾಡಿನ 14 ಕಡೆಗಳಲ್ಲಿ ಇದೇ ರೀತಿ ಶೋಧ ನಡೆಸಲಾಗಿತ್ತು.