ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಭಯೋತ್ಪಾದನಾ ಹಿಂಸಾಚಾರ ಶೇ 60 ಕುಸಿತ: ಡಿಜಿಪಿ

Last Updated 15 ಫೆಬ್ರುವರಿ 2020, 7:21 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷದಇದೇ ಅವಧಿಗೆ ಹೋಲಿಸಿದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಹಿಂಸಾಚಾರ ಶೇ 60ರಷ್ಟು ಕಡಿಮೆಯಾಗಿದೆ ಎಂದುಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತುಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್‌ ಮಾಹಿತಿ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

ಕಾಶ್ಮೀರದ ಸದ್ಯದ ಪರಿಸ್ಥಿತಿ ಮತ್ತು ಶಾಂತಿಪಾಲನೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಸಿಂಗ್, ಈ ವರ್ಷದ ಜ.1ರಿಂದ ಫೆ.13ರವರೆಗಿನ ಅವಧಿಯಲ್ಲಿ ಬೆಳಕಿಗೆ ಬಂದ ಪ್ರಕರಣಗಳನ್ನುಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಭಯೋತ್ಪಾದನಾ ಚಟುವಟಿಕೆ ಶೇ 60ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವರ್ಷ ಈವರೆಗೆ ಉಗ್ರರೊಂದಿಗೆ ಗುಂಡಿನ ಚಕಮಕಿ ಅಥವಾ ಮೃತ ಭಯೋತ್ಪಾದಕರ ಅಂತ್ಯಸಂಸ್ಕಾರ ಸಂದರ್ಭ ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟದ ಯಾವುದೇ ಘಟನೆ ವರದಿಯಾಗಿಲ್ಲ. ಜನವರಿಯಿಂದೀಚೆಗೆ ಒಟ್ಟು 20 ಉಗ್ರರನ್ನು ಕೊಲ್ಲಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಇವರಲ್ಲಿ 10 ಮಂದಿ ಜೈಷ್ ಎ ಮೊಹಮದ್‌ ಸಂಘಟನೆಗೆ ಸೇರಿದವರು. 11 ಮಂದಿ ಹಿಜ್ಬುಲ್ ಮುಜಾಹಿದ್ದೀನ್‌ಗೆ ಸೇರಿದವರು. ಕಾಶ್ಮೀರ ಗಡಿಗೆ ನುಸುಳಿದ್ದ ಮೂವರನ್ನು ಬಾನ್ ಟೋಲ್‌ ಪ್ಲಾಜಾದಲ್ಲಿ ಭದ್ರತಾಪಡೆಗಳು ನಿಗ್ರಹಿಸಿದ್ದವು.

ಇದರ ಜೊತೆಗೆಶ್ರೀನಗರ ಮತ್ತು ಇತರೆಡೆ ಕೈಬಾಂಬ್ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ಉಗ್ರಗಾಮಿಗಳ ಸಹಚರರನ್ನುಬಂಧಿಸಲಾಗಿದೆ. ಭಯೋತ್ಪಾದಕರಿಗೆ ಅಗತ್ಯ ನೆರವು ಒದಗಿಸುತ್ತಿದ್ದ 43 ಮಂದಿಯನ್ನು ಬಂಧಿಸಲಾಗಿದೆ.

ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಹೇರಿದ ನಂತರ ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ಯಾರಾ ಮಿಲಿಟರಿ ಪಡೆಗಳ ನಡುವಣ ಸಂವಹನ ಸುಧಾರಿಸಿತ್ತು. ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದು ಉಗ್ರ ನಿಗ್ರಹ ಕಾರ್ಯಾಚರಣೆಗೆ ಪೂರಕ ಬೆಳವಣಿಗೆಯಾಯಿತು ಎಂದು ಸಚಿವರು ಈ ಸಂದರ್ಭ ಅಭಿಪ್ರಾಯಪಟ್ಟರು ಎಂದು ಬಲ್ಲ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದೊಡ್ಡಮಟ್ಟದ ಕಾನೂನು ಸುವ್ಯವಸ್ಥೆ ಸಮಸ್ಯೆಯೂ ಕಾಣಿಸಿಕೊಂಡಿಲ್ಲ.ಪಹರೆ ವ್ಯವಸ್ಥೆಯನ್ನುಸುಭದ್ರಗೊಳಿಸಲಾಗಿದೆ. ಸಿಬ್ಬಂದಿ ಸ್ವತಃ ಪಹರೆ ತಿರುಗುವುದರ ಜೊತೆಗೆ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಉಗ್ರಗಾಮಿಗಳಾಗಲೆಂದು ಮನೆಯಿಂದ ಹೊರಬಂದಿದ್ದ ದಕ್ಷಿಣ ಕಾಶ್ಮೀರದ ಏಳು ಯುವಕರು ತಮ್ಮ ಕುಟುಂಬಗಳಿಗೆ ಹಿಂದಿರುಗಿದ ಬೆಳವಣಿಗೆಯ ಬಗ್ಗೆಯೂ ಅಧಿಕಾರಿಗಳು ಇದೇ ಸಂದರ್ಭ ಸಚಿವರ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT