ತಿರುವನಂತಪುರ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ‘ಏಕವ್ಯಕ್ತಿ’ ಸರ್ಕಾರ ಆಡಳಿತದಲ್ಲಿದೆ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಲೇವಡಿ ಮಾಡಿದ್ದಾರೆ.
ಬಿಜೆಪಿ ಕೇವಲ ‘ಇಬ್ಬರು ವ್ಯಕ್ತಿಗಳ’ ಕಪಿಮುಷ್ಠಿಯಲ್ಲಿದೆ ಎಂದು ಅವರು ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ.
ತಿರುವನಂತಪುರದ ಸಂಸದ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ರಚಿಸಿದ ‘ಪ್ಯಾರಾಡಾಕ್ಸಿಕಲ್ ಪ್ರೈಮ್ ಮಿನಿಸ್ಟರ್, ನರೇಂದ್ರ ಮೋದಿ ಆಂಡ್ ಹಿಸ್ ಇಂಡಿಯಾ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಅರ್ಥ ವ್ಯವಸ್ಥೆ ಗೊತ್ತಿರದ ವಕೀಲರೊಬ್ಬರು ಹಣಕಾಸು ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಟಿ.ವಿ. ನಟಿಯೊಬ್ಬರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿದ್ದರು. ನಟನಾಗಿರುವ ನನಗೆ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವ ಅಧಿಕಾರವಿಲ್ಲವೇ’ ಎಂದು ಸಿನ್ಹಾ ಪ್ರಶ್ನಿಸಿದ್ದಾರೆ.
‘ಎಲ್ಲರೂ ತಲೆದೂಗುವಂತೆ ಮಾತನಾಡುವ ಕಲೆಯನ್ನು ಬೆಳೆಸಿಕೊಂಡಿರುವ ಪ್ರಧಾನಿ ಮೋದಿ ಅವರು ದಲಿತರು ಮತ್ತು ಮುಸ್ಲಿಮರ ಮೇಲಿನ ದಬ್ಬಾಳಿಕೆ, ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳ ಸಂದರ್ಭದಲ್ಲಿ ಏಕೆ ಮೌನಕ್ಕೆ ಜಾರುತ್ತಾರೆ ಎಂದು ತಿಳಿಯುತ್ತಿಲ್ಲ’ ಎಂದು ಸಂಸದ ಶಶಿ ತರೂರ್ ಹೇಳಿದರು.
ಕಾಂಗ್ರೆಸ್ ಆಹ್ವಾನ: ಬಿಜೆಪಿ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಅವರನ್ನು ಕಾಂಗ್ರೆಸ್ ಸೇರುವಂತೆ ಸಂಸದ ಶಶಿ ತರೂರ್ ಆಹ್ವಾನ ನೀಡಿದರು. ಈ ಬಗ್ಗೆ ಸಿನ್ಹಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
**
’ಶತ್ರು’ಗೆ ಕಾಂಗ್ರೆಸ್ ಆಹ್ವಾನ
ಬಿಜೆಪಿ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಅವರನ್ನು ಕಾಂಗ್ರೆಸ್ ಸೇರುವಂತೆ ಸಂಸದ ಶಶಿ ತರೂರ್ ಆಹ್ವಾನ ನೀಡಿದರು. ಆದರೆ, ಈ ಬಗ್ಗೆ ಸಿನ್ಹಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
**
ಈ ದೇಶದಲ್ಲಿ ಹಾ ಮಾರುವ ವ್ಯಕ್ತಿಯೊಬ್ಬ ಪ್ರಧಾನಿಯಾಗುವುದಾದರೆ, ನಟನೊಬ್ಬ ಏಕೆ ಉದ್ಯೋಗ, ನೋಟು ರದ್ದು, ಜಿಎಸ್ಟಿ ಬಗ್ಗೆ ಮಾತನಾಡಬಾರದು - ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ