ಮುಂಬೈ: ‘ಹಿಂದುತ್ವ ಪ್ರತಿಪಾದಕ ವಿ.ಡಿ. ಸಾವರ್ಕರ್ಗೆ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುವವರು ಅಂಡಮಾನ್ನ ಸೆಲ್ಯುಲರ್ ಜೈಲಿನಲ್ಲಿ ಎರಡು ದಿವಸ ಕಳೆಯಬೇಕು’ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಶನಿವಾರ ಹೇಳಿದ್ದಾರೆ.
‘ಸಾವರ್ಕರ್ ಅವರು ಬ್ರಿಟಿಷರಿಂದ ಜೈಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಇದರಿಂದ ಸಾಧ್ಯ’ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಶಿವಸೇನಾ ಅಧಿಕಾರ ಹಂಚಿಕೊಂಡಿದ್ದರೂ ಸೈದ್ಧಾಂತಿಕವಾಗಿ ಭಿನ್ನವಾಗಿದೆ ಎಂಬುದನ್ನು ರಾವುತ್ ಹೇಳಿಕೆ ಸ್ಪಷ್ಟಪಡಿಸಿದೆ.
ರಾವುತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಆದಿತ್ಯ ಠಾಕ್ರೆ ‘ಹಳೆಯದನ್ನು ಕೆದಕುವ ಅಗತ್ಯವಿಲ್ಲ’ ಎಂದಿದ್ದಾರೆ.
‘ಮಹಾ ವಿಕಾಸ ಅಘಾಡಿ ಸರ್ಕಾರ ಜನರ ಆಕಾಂಕ್ಷೆಗಳ ಬಗ್ಗೆ ಮಾತನಾಡುತ್ತಿದೆ. ಕಾಂಗ್ರೆಸ್ ಮತ್ತು ಶಿವಸೇನಾ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದಿರುವುದು ಕೆಲವರಿಗೆ ಸಹ್ಯವಾಗುತ್ತಿಲ್ಲ’ ಎಂದೂ ಹೇಳಿದ್ದಾರೆ.
ಸಾವರ್ಕರ್ಗೆ ಭಾರತ ರತ್ನ ಪ್ರಶಸ್ತಿ ನೀಡುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು.
ಕಾಂಗ್ರೆಸ್ ತಿರುಗೇಟು: ರಾವುತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಹಿಂದುತ್ವ ಸಿದ್ಧಾಂತ ಅನುಸರಿಸುವವರು ಅಂಡಮಾನ್ ಜೈಲಿಗೆ ಭೇಟಿ ನೀಡಿ, ಬ್ರಿಟಿಷರ ಬಳಿ ಎಂದೂ ಕ್ಷಮೆ ಯಾಚಿಸದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನೂ ಅರ್ಥೈಸಿಕೊಳ್ಳಬೇಕು’ ಎಂದಿದೆ.
‘ಬಿ. ಆರ್. ಅಂಬೇಡ್ಕರ್ ಅವರನ್ನು ‘ಮತಾಂಧ’ ಎಂದೂ ಬೌದ್ಧರನ್ನು ‘ರಾಷ್ಟ್ರದ್ರೋಹಿ’ಗಳು ಎಂದಿರುವ ಸಾವರ್ಕರ್ ಹೇಳಿಕೆಗಳನ್ನು ಕಡೆಗಣಿಸಿ, ಬಿಜೆಪಿ ಅವರಿಗೆ ಭಾರತ ರತ್ನ ನೀಡಬಹುದು’ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.
ವ್ಯಕ್ತಿಯಲ್ಲ ವಿಚಾರಧಾರೆ:‘ವಿ.ಡಿ. ಸಾವರ್ಕರ್ ಕೇವಲ ವ್ಯಕ್ತಿಯಲ್ಲ, ವಿಚಾರಧಾರೆ. ಈ ವಿಚಾರಧಾರೆ ಎಂದಿಗೂ ಪ್ರಸ್ತುತತೆ ಕಳೆದುಕೊಳ್ಳುವುದಿಲ್ಲ’ ಎಂದು ಮಹಾರಾಷ್ಟ್ರದ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.