ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುವಿಕೆಯ ಯತ್ನವನ್ನು ವಿಫಲಗೊಳಿಸಿರುವ ಸೇನೆಯು, ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮೂವರು ಉಗ್ರರನ್ನು ಸೋಮವಾರ ಹತ್ಯೆ ಮಾಡಿದೆ.
ಜಮ್ಮು ಪ್ರದೇಶದ ರಾಜೌರಿ ಜಿಲ್ಲೆಯ ನೌಶೆರಾ ವಲಯದಲ್ಲಿ ಈ ಕಾರ್ಯಾಚರಣೆ ನಡೆದಿದೆ.
’ಮೇ 28ರಿಂದ ಉಗ್ರರ ನುಸುಳುವಿಕೆಯನ್ನು ಪತ್ತೆ ಮಾಡಲು ತೀವ್ರ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕಟ್ಟೆಚ್ಚರವಹಿಸಿದ್ದ ಸೇನಾ ಪಡೆಗಳು ನುಸುಳುವಿಕೆಯನ್ನು ವಿಫಲಗೊಳಿಸಿವೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ‘ ಎಂದು ಭಾರತೀಯ ಸೇನೆ ಪ್ರಕಟಣೆ ತಿಳಿಸಿದೆ.
ಸ್ಥಳದಿಂದ ಎರಡು ಎಕೆ ಬಂದೂಕಿನ ಜೊತೆಗೆ 13 ಮ್ಯಾಗಜಿನ್, ಅಮೆರಿಕ ನಿರ್ಮಿತ ಎಂ–16ಎ2 ರೈಫಲ್ ಜೊತೆಗೆ 6 ಮ್ಯಾಗಜಿನ್, 9 ಎಂಎಂ ಚೈನೀಸ್ ಪಿಸ್ತೂಲ್, ಗ್ರೆನೇಡ್ ಲಾಂಚರ್ ಸಹಿತ ಆರು ಗ್ರೆನೇಡ್ಗಳು, ಔಷಧಗಳು, ₹17 ಸಾವಿರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಗಡಿಯ ಕಠುವಾ–ಸಾಂಬಾ ವಲಯ ಮತ್ತು ಪೂಂಚ್ ಜಿಲ್ಲೆಯಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿವೆ. ಬಿಎಸ್ಎಫ್ ಯೋಧರು ಮತ್ತು ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜಮ್ಮು–ಪಠಾಣಕೋಟ್ ಹೆದ್ದಾರಿಯಲ್ಲೂ ಕಟ್ಟೆಚ್ಚರವಹಿಸಲಾಗಿದೆ.
‘ಕೊರೊನಾ ವೈರಸ್ ಸಾಂಕ್ರಾಮಿಕ ಕಾಯಿಲೆಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನೇ ಪಾಕಿಸ್ತಾನ ಸೇನೆ ದುರುಪಯೋಗ ಪಡೆಸಿಕೊಳ್ಳಲು ಮುಂದಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನುಸುಳಲು ಪ್ರಚೋದಿಸುತ್ತಿದೆ’ ಎಂದು ಮೂಲಗಳು ತಿಳಿಸಿವೆ.