ನವದೆಹಲಿ: ತಿಹಾರ್ ಜೈಲಿನ ಅಧಿಕಾರಿಗಳು ಹಲ್ಲೆ ನಡೆಸಿ ಬೆನ್ನ ಮೇಲೆ ‘ಓಂ‘ ಗುರುತಿನ ಬರೆ ಹಾಕಿದ್ದಾರೆ ಎಂದು ವಿಚಾರಣಾಧೀನ ಕೈದಿಯೊಬ್ಬ ಆರೋಪಿಸಿದ್ದು, ದೆಹಲಿಯ ನ್ಯಾಯಾಲಯವು ಈ ಕುರಿತು ತನಿಖೆಗೆ ಆದೇಶಿಸಿದೆ.
ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಬ್ಬೀರ್ ಎಂಬಾತನ ನ್ಯಾಯಾಂಗ ಬಂಧನದ ಅವಧಿ ಶುಕ್ರವಾರ ಪೂರ್ಣಗೊಂಡಿತ್ತು. ಈ ಕಾರಣಕ್ಕೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಆತ ನ್ಯಾಯಾಧೀಶರಿಗೆ ತನ್ನ ಬೆನ್ನಿನ ಮೇಲೆ ಬರೆ ಹಾಕಿರುವುದನ್ನು ತೋರಿಸಿದ್ದಾನೆ.
ಜೈಲಿನ ಅಧಿಕಾರಿಗಳು ಕಾದ ಕಬ್ಬಿಣದ ಸಲಕರಣೆಯಿಂದ ಬೆನ್ನ ಮೇಲೆ ’ಓಂ‘ ಗುರುತು ಹಾಕಿದ್ದಾರೆ ಎಂದು ದೂರಿದ್ದಾನೆ.
ಜೈಲಿನ ಡಿಜಿಪಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಧೀಶರು, 24 ಗಂಟೆಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ನಬ್ಬೀರ್ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತಕ್ಷಣ ಚಿಕಿತ್ಸೆ ಕೊಡಿಸಬೇಕು ಎಂದೂ ಆದೇಶಿಸಿದ್ದಾರೆ.
ಜೈಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಬೇಕು ಮತ್ತು ಇತರ ಕೈದಿಗಳ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂದೂ ಹೇಳಿದ್ದಾರೆ.
ಜೈಲು ಅಧೀಕ್ಷಕ ರಾಜೇಶ್ ಚೌಹಾಣ್ ಅವರು ಚಿತ್ರಹಿಂಸೆ ನೀಡಿದ್ದಾರೆ ಮತ್ತು ಎರಡು ದಿನಗಳ ಕಾಲ ಊಟ ನೀಡಿಲ್ಲ ಎಂದೂ ನಬ್ಬೀರ್ ಹೇಳಿದ್ದಾನೆ.