ನವದೆಹಲಿ: ಪುಲ್ವಮಾದಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯು ಮಾತುಕತೆಯ ಸಮಯ ಮುಗಿದಿದೆ ಎಂಬುದನ್ನು ನಿರೂಪಿಸಿದೆ. ಈಗ ಇಡೀ ವಿಶ್ವವು ಭಯೋತ್ಪಾದನೆ ಮತ್ತು ಅದಕ್ಕೆ ಕುಮ್ಮಕ್ಕು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾಲ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅರ್ಜೆಂಟಿನಾದ ಅಧ್ಯಕ್ಷ ಮಾರಿಷಿಯೊ ಮ್ಯಾಕ್ರಿ ಜತೆ ಇಲ್ಲಿನ ಹೈದರಾಬಾದ್ ಹೌಸ್ನಲ್ಲಿ ಮಾತುಕತೆ ನಡೆಸಿದ ಬಳಿಕ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
‘ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದೂ ಒಂದು ರೀತಿಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದಂತೆ. ಜಿ20 ಸದಸ್ಯ ರಾಷ್ಟ್ರಗಳಾಗಿ ನಾವು ‘ಹಂಬರ್ಗ್ ಒಪ್ಪಂದ’ದಲ್ಲಿ ಉಲ್ಲೇಖಿಸಲಾದ 11 ಅಂಶಗಳನ್ನು ಜಾರಿಗೊಳಿಸುವುದೂ ಬಹು ಮುಖ್ಯ. ಭಯೋತ್ಪಾದನೆ ಬಗ್ಗೆ ಭಾರತ ಮತ್ತು ಅರ್ಜೆಂಟಿನಾ ಇಂದು ವಿಶೇಷ ಘೋಷಣೆ ಮಾಡಲಿವೆ’ ಎಂದು ಮೋದಿ ಹೇಳಿದರು.
ಮಾರಿಷಿಯೊ ಮ್ಯಾಕ್ರಿ ಮಾತನಾಡಿ, ‘ಕೆಲವು ದಿನಗಳ ಹಿಂದೆ ಪುಲ್ವಾಮಾದಲ್ಲಿ ನಡೆದ ಭೀಕರ ದಾಳಿಯ ಬಗ್ಗೆ ಸಂತಾಪವಿದೆ. ಯಾವುದೇ ರೀತಿಯ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಮನುಷ್ಯತ್ವದ ಮೇಲಿನ ಇಂತಹ ದಾಳಿಗಳ ವಿರುದ್ಧ ಹೋರಾಡಲು ಕೈಜೋಡಿಸಲಿದ್ದೇವೆ’ ಎಂದು ಹೇಳಿದರು.