ನವದೆಹಲಿ: ಮುಸ್ಲಿಂಪುರುಷರು ತ್ರಿವಳಿ ತಲಾಖ್ ನೀಡಿದರೆ, ಅದನ್ನು ಅಪರಾಧ ಎಂದು ಪರಿಗಣಿಸಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಗುರುವಾರ ಮೂರನೇ ಬಾರಿಗೆ ಜಾರಿಗೊಂಡಿದೆ.
ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಸುಗ್ರೀವಾಜ್ಞೆ, 2019ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿ ಹಾಕಿದ್ದಾರೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.
ಸುಗ್ರೀವಾಜ್ಞೆಯನ್ನು ಪುನಃ ಜಾರಿಗೆ ತರಲು ಮಂಗಳವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿತ್ತು.
ತ್ರಿವಳಿ ತಲಾಖ್ ಸಂಬಂಧದ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಆದರೆ ರಾಜ್ಯಸಭೆಯಲ್ಲಿ ಸಂಖ್ಯಾಬಲ ಕೊರತೆಯಿಂದಾಗಿ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.