ನವದೆಹಲಿ: ‘ಮಂದಿರ–ಮಸೀದಿಗೆ ಬದಲಾಗಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಮತ ನೀಡಿ ಎಂದು ಜನರ ಮನವೊಲಿಸಲು ನಾನು ಯತ್ನಿಸಿದೆ ಎಂದು ಒಪ್ಪಿಕೊಳ್ಳಲು ನನಗೆ ಹಿಂಜರಿಕೆ ಇಲ್ಲ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಚುನಾವಣಾ ಸಮಿತಿ ನೀಡಿದ ನೋಟಿಸ್ಗೆ ಉತ್ತರಿಸಿ ಸಿಸೋಡಿಯಾ ಈ ಮಾತು ಹೇಳಿದ್ದಾರೆ. ಎಎಪಿ ಸರ್ಕಾರ ಪಕ್ಷದ ಸಾಧನೆಗಳನ್ನು ಕುರಿತ ಪತ್ರಗಳನ್ನು ಮತದಾರರಿಗೆ ಕಳುಹಿಸಲು ಸಾರ್ವಜನಿಕರ ಹಣ ಬಳಸುತ್ತಿದೆ ಎಂಬ ಬಿಜೆಪಿ ದೂರು ಆಧರಿಸಿ ಚುನಾವಣಾ ಸಮಿತಿ ನೋಟಿಸ್ ಜಾರಿ ಮಾಡಿತ್ತು. ಸಣ್ಣತನದ ರಾಜಕಾರಣ ಮಾಡಬೇಡಿ. ನೀವು ಏನಾದರೂ ಕೆಲಸ ಮಾಡಿದ್ದರೆ, ಅದರ ಆಧಾರದಲ್ಲಿಯೇ ಮತಯಾಚಿಸಿ ಎಂದು ಅವರು ಬಿಜೆಪಿಯವರಿಗೆ ಕಿವಿಮಾತು ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್, ಉದ್ಯೋಗ ಇನ್ನಿತರ ವಿಷಯಗಳ ಆಧಾರದಲ್ಲಿ ಮತ ಕೇಳುವುದನ್ನು ಚುನಾವಣಾ ಆಯೋಗವು ಪ್ರೋತ್ಸಾಹಿಸಬೇಕು ಎಂದು ಪ್ರತಿಪಾದಿಸಿದರು.