ನವದೆಹಲಿ (ಪಿಟಿಐ): ಮಾಧ್ಯಮಗೋಷ್ಠಿಯನ್ನು ಎದುರಿಸುವುದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ವಾರಾಣಸಿಯಲ್ಲಿ ಮೋದಿ ಅವರು ಇದೇ 26ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಅವರು ಮಾಧ್ಯಮಗೋಷ್ಠಿ ನಡೆಸಲಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸುದ್ದಿ ವೈರಲ್ ಸಹ ಆಗಿತ್ತು. ಆದರೆ ಅದರ ಬೆನ್ನಲ್ಲೇ ಬಿಜೆಪಿಯು ಈ ಸಂಬಂಧ ಸ್ಪಷ್ಟನೆ ನೀಡಿತು.
‘ಪ್ರಧಾನಿ ಮೋದಿ ಅವರು ಇದೇ 25 ಮತ್ತು 26ರಂದು ವಾರಾಣಸಿಯಲ್ಲಿ ಇರಲಿದ್ದಾರೆ. ಎರಡೂ ದಿನ ಕ್ಷೇತ್ರದ ಹಲವೆಡೆ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಆದರೆ ಯಾವುದೇ ಮಾಧ್ಯಮಗೋಷ್ಠಿಯಲ್ಲಿ ಮೋದಿ ಪಾಲ್ಗೊಳ್ಳುವುದಿಲ್ಲ’ ಎಂದು ಬಿಜೆಪಿ ಮಾಹಿತಿ ನೀಡಿತು. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿತು.