ಶನಿವಾರ ಮುಂಜಾನೆ 5.15ಕ್ಕೆ ರೇಷ್ಮಾ, ಶಾನಿಲಾ ಸೇರಿದ 8 ಮಂದಿ ತಂಡ ಶಬರಿಮಲೆ ಹತ್ತಲು ಶುರು ಮಾಡಿದ್ದಾರೆ. ಆ ಹೊತ್ತಿಗೆ ಅಲ್ಲಿ ಪ್ರತಿಭಟನಾಕಾರರು ಇರಲಿಲ್ಲ. ಆದರೆ ಪಂಪಾದಿಂದ ಸನ್ನಿಧಾನದವರೆಗೆ ಶಬರಿಮಲೆ ಕರ್ಮ ಸಮಿತಿ ಸದಸ್ಯರು ಮತ್ತು ಅಯ್ಯಪ್ಪ ಭಕ್ತರು ತಡೆಯೊಡ್ಡಲು ನಿಂತಿದ್ದರು.
ಈ ಹೊತ್ತಲ್ಲಿ ಮಹಿಳೆಯರನ್ನು ಪಂಪಾದಿಂದ ಸನ್ನಿಧಾನಕ್ಕೆ ಕರೆದುಕೊಂಡು ಹೋದರೆ ಅಲ್ಲಿ ಗಲಾಟೆಯಾಗುವ ಸಾಧ್ಯತೆ ಇದೆ ಎಂದು ಅರಿತ ಪೊಲೀಸರು ಮಹಿಳೆಯರಲ್ಲಿ ವಾಪಸ್ ಹೋಗುವಂತೆ ಹೇಳಿದ್ದಾರೆ.ನಿಲಯ್ಕಲ್ ಪೊಲೀಸ್ ವಿಶೇಷ ಅಧಿಕಾರಿ ಜಮಾಲುದ್ದೀನ್ ಇವರಲ್ಲಿ ಮಾತುಕತೆ ನಡೆಸಿ ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿದ್ದಾರೆ. ಆದರೆ ಸನ್ನಿಧಾನಕ್ಕೆ ಹೋಗಲೇ ಬೇಕೆಂದು ಮಹಿಳೆಯರು ಹಠ ಹಿಡಿದಿದ್ದಾರೆ.
ಇದಕ್ಕೆ ಒಪ್ಪಿದ ಪೊಲೀಸರು ಪಂಪಾವರೆಗೆ ನಾವು ಕರೆದುಕೊಂಡು ಹೋಗುವುದಾಗಿಯೂ ಅಲ್ಲಿ ಗಲಾಟೆ ನಡೆದರೆ ವಾಪಾಸಾಗಬೇಕೆಂದು ಹೇಳಿದ್ದಾರೆ.ಪೊಲೀಸರ ಈ ನಿರ್ಧಾರಕ್ಕೆ ಮಹಿಳೆಯರು ಒಪ್ಪಲಿಲ್ಲ.ಆನಂತರ ಡಿಜಿಪಿ ಅವರಿಗೆ ವಿಷಯತಿಳಿಸಿದ ಪೊಲೀಸರು, ಮಹಿಳೆಯರಲ್ಲಿ ಅಲ್ಲಿಂದ ಮರಳಲು ಹೇಳಿದ್ದಾರೆ.