ಮುಂಬೈ:‘ಮಹಾ ವಿಕಾಸ ಆಘಾಡಿ’ಯ ನಾಯಕಉದ್ಧವ್ ಠಾಕ್ರೆ ಗುರುವಾರ ಸಂಜೆ 6.45ಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಅವರ ಮುಂದೆ ಸವಾಲುಗಳ ಮಹಾಪುರವೇ ನಿಂತಿದೆ.
ಮುಖ್ಯಮಂತ್ರಿ ಹುದ್ದೆಗೆ ಏರಿರುವ ಶಿವಸೇನಾ ಪಕ್ಷದ ಮೂರನೇ ವ್ಯಕ್ತಿ ಇವರಾಗಿದ್ದು, ಭಿನ್ನ ನಿಲುವುಗಳಿರುವ ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿ ಮೈತ್ರಿಸರ್ಕಾರದ ಅಧಿಪತ್ಯ ವಹಿಸಿಕೊಂಡಿದ್ದಾರೆ. ಠಾಕ್ರೆ ಮುಂದಿರುವ 5 ಪ್ರಮುಖ ಸವಾಲುಗಳು ಈ ಕೆಳಗಿವೆ.
ಭಿನ್ನ ನಿಲುವಿನ ಮೈತ್ರಿ ಪಕ್ಷಗಳೊಂದಿಗೆ ಹೆಜ್ಜೆ ಹಾಕುವುದು
ಆಡಳಿತ ಹಾಗೂ ಶಾಸಕಾಂಗದ ಯಾವುದೇ ಅನುಭವವಿಲ್ಲದೆಯೇ ಉದ್ಧವ್ ಠಾಕ್ರೆ ಅವರು ಮೂರು ಪ್ರಮುಖ ಪಕ್ಷಗಳಾದ ಶಿವಸೇನಾ, ಎನ್ಸಿಪಿ, ಕಾಂಗ್ರೆಸ್ನ ಮೈತ್ರಿಯ ನೇತೃತ್ವ ವಹಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹೊಸ ಮೈತ್ರಿಯೊಂದಿಗೆ ನಾಜೂಕಾಗಿ ಹೆಜ್ಜೆ ಹಾಕುವುದು. ಜೊತೆಗೆ ಕಾಂಗ್ರೆಸ್, ಎನ್ಸಿಪಿ ಪಕ್ಷಗಳ ರಾಜಕೀಯ ಶೈಲಿ, ಕಾರ್ಯಾಚರಣೆ, ಆಡಳಿತಾತ್ಮಕ ಆದ್ಯತೆಗಳು ಮತ್ತು ಸಚಿವ ಸಂಪುಟದ ಸದಸ್ಯರ ಅಹಂಗಳನ್ನು ಸುಧಾರಿಸುವುದೇ ಉದ್ಧವ್ ಅವರಿಗೆ ಬಹುದೊಡ್ಡ ಸವಾಲಾಗಲಿದೆ.
ಕೃಷಿಕರ ಎಲ್ಲಾ ಸಾಲ ಮನ್ನಾ
ಮಹಾ ವಿಕಾಸ ಆಘಾಡಿಯ ಸಿಎಂಪಿ ಪ್ರಕರ ಕೃಷಿಕರ ಎಲ್ಲಾ ಸಾಲ ಮನ್ನ ಮಾಡುವುದು ಉದ್ಧವ್ ಅವರ ಮೊದಲ ನಿರ್ಧಾರವಾಗಿರುತ್ತದೆ. ಇದಕ್ಕಾಗಿ ಸರ್ಕಾರಕ್ಕೆ ₹30 ಸಾವಿರ ಕೋಟಿ ಹೆಚ್ಚುವರಿ ಹಣಕಾಸು ಅಗತ್ಯವಿದೆ. ಈ ಹಿಂದಿನ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರ ಷರತ್ತುಬದ್ಧ ಸಾಲ ಮನ್ನಾ ಮಾಡಿತ್ತು. ಅದರ ಭಾಗವಾಗಿ ₹24 ಸಾವಿರ ಕೋಟಿಯನ್ನು ಬ್ಯಾಂಕ್ಗಳಿಗೆ ಬಿಡುಗಡೆ ಮಾಡಿತ್ತು. ಕ್ಷೀಣಿಸುತ್ತಿರುವ ಬೊಕ್ಕಸ ಹೊಂದಿರುವ ರಾಜ್ಯ ಸರ್ಕಾರಕ್ಕೆ 4.15 ಲಕ್ಷ ಕೋಟಿ ಸಾಲ ಮನ್ನಾ ಸುಲಭದ ಕೆಲವಲ್ಲ.
ಮೂಲಸೌಕರ್ಯ ಸಮಸ್ಯೆಗಳು
ಮೂಲಸೌಕರ್ಯಕ್ಕಾಗಿ ಫಡಣವೀಸ್ ನೇತೃತ್ವದ ಸರ್ಕಾರ ಉತ್ತರ ಯೋಜನೆಗಳನ್ನು ಹೊಂದಿತ್ತು. ₹1.5 ಲಕ್ಷ ಕೋಟಿ ವೆಚ್ಚದಲ್ಲಿ 6 ಮೆಟ್ರೊ ಕಾರಿಡಾರ್ ಸೇರಿದ ನಗರ ನಿರ್ಮಾಣ ಯೋಜನೆಗಳನ್ನು ರೂಪಿಸಲಾಗಿತ್ತು. ಈ ಯೋಜನೆಗಳು ಅನುಷ್ಠಾನಗೊಳ್ಳದಿದ್ದರೆ ಠಾಕ್ರೆ ಸರ್ಕಾರದ ನಗರಾಭಿವೃದ್ಧಿಯಲ್ಲಿ ಹಿಂದುಳಿಯಲಿದೆ. ಸೇನಾ ನಿಯಂತ್ರಣದಲ್ಲಿರುವ ಬೃಹಮುಂಬೈ ನಗರ ಪಾಲಿಕೆಗೆ ಉತ್ತಮ ಹೆಸರಿಲ್ಲ. ಇದನ್ನು ಬದಲಿಸಬೇಕೆಂದರೆ ಉದ್ಧವ್ ಮೊದಲು ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು.
ನಿರುದ್ಯೋಗ ಸಮಸ್ಯೆ
ಮಹಾ ವಿಕಾಸ ಆಘಾಡಿಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ (ಸಿಎಂಪಿ) ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ 80ರಷ್ಟು ಮೀಸಲಾತಿ ನೀಡುವ ಕಾನೂನು ರೂಪಿಸುತ್ತೇವೆ ಎಂದು ಭರವಸೆ ನೀಡಿದೆ. ಆದರೆ, ಈ ವಿಷಯದಲ್ಲಿ ಸರ್ಕಾರ ಕೇವಲ ಗಿಮಿಕ್ ಮಾಡುವ ಬದಲು ಹೆಚ್ಚಿನದನ್ನು ಮಾಡಬೇಕಿದೆ.
ರಾಜ್ಯ ಆಯವ್ಯಯ ನಿರ್ವಹಣೆ
ಕಳೆದ ಐದು ವರ್ಷಗಳಲ್ಲಿ ರಾಜ್ಯದ ಹಣಕಾಸು ಸ್ಥಿತಿ ಭಾರಿ ಕುಸಿತವಾಗಿದೆ. ಮೂಲಸೌಕರ್ಯದ ಭಾರಿ ಯೋಜನೆಗಳಿಗೆ ಅಂತರರಾಷ್ಟ್ರೀಯ ಸಾಲ ಪಡೆಯುವ ಮೂಲಕ ಹೂಡಿಕೆ ಮಾಡಲಾಗಿದೆ. ರಾಜ್ಯದ ಸಾಲ ₹4.71 ಲಕ್ಷ ಕೋಟಿಗೆ ಏರಿಕೆಯಾಗಿದೆ. ಸಾಲ ಪಡೆದು ಕೃಷಿ ಸಾಲ ಮನ್ನ ಮಾಡುವುದಾದರೆ, ಸಾಲದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ರಾಜ್ಯದ ಆಯವ್ಯಯ ನಿರ್ವಹಣೆಯೂ ಉದ್ಧವ್ ಠಾಕ್ರೆಗೆ ಸವಾಲಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.