ಮುಂಬೈ : ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಮಗ, ಶಾಸಕ ಆದಿತ್ಯ ಠಾಕ್ರೆ ಅವರು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಗುರುವಾರ ರಾತ್ರಿ ಇಲ್ಲಿ ಭೇಟಿ ಮಾಡಿದರು.
ಪವಾರ್ ಅವರು ದೆಹಲಿಯಿಂದ ಮರಳಿದ ಬಳಿಕ ಅವರ ನಿವಾಸಕ್ಕೆ ತೆರಳಿದ ಉದ್ಧವ್ ಮತ್ತು ಆದಿತ್ಯ ಠಾಕ್ರೆ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸಿದರು.
ಕಾಂಗ್ರೆಸ್ ಮತ್ತು ಎನ್ಸಿಪಿ ಮುಖಂಡರು ತಮ್ಮ ಚುನಾವಣಾ ಪೂರ್ವ ಮಿತ್ರಪಕ್ಷಗಳಾದ ಪಿಡಬ್ಲ್ಯುಪಿ, ಸಮಾಜವಾದಿ ಪಕ್ಷ, ಸ್ವಾಭಿಮಾನಿ ಪಕ್ಷ ಮತ್ತು ಸಿಪಿಎಂ ಜತೆಗೆ ಚರ್ಚಿಸಿ ನಂತರದಲ್ಲಿ ಶಿವಸೇನಾ ಮುಖಂಡ ರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಉದ್ಧವ್ ಠಾಕ್ರೆ ಅವರು ಶುಕ್ರವಾರ ಪಕ್ಷದ ಹಿರಿಯ ನಾಯಕರು ಮತ್ತು ಶಾಸಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಯೇತರ ಮೂರು ಪಕ್ಷಗಳು ಸರ್ಕಾರ ರಚನೆಗೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ನಿಲುವನ್ನು ಈ ಸಂದರ್ಭದಲ್ಲಿ ತೀರ್ಮಾನಿಸಲಾಗುವುದು ಎಂದು ಶಿವಸೇನಾ ನಾಯಕರು ಹೇಳಿದ್ದಾರೆ.
ಸರ್ಕಾರ ರಚನೆ ಸಂಬಂಧ ಮೂರೂ ಪಕ್ಷಗಳು ಶುಕ್ರವಾರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.