ಮಡಿಕೇರಿ: ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಮಡಿಕೇರಿ, ಭಾಗಮಂಡಲ, ನಾಪೋಕ್ಲು, ಚೇರಂಬಾಣೆ, ಅಪ್ಪಂಗಳ, ಬೆಟ್ಟಗೇರಿಯಲ್ಲಿ ಅರ್ಧ ಗಂಟೆ ಕಾಲ ಜೋರು ಮಳೆ ಸುರಿಯಿತು.
ಮಡಿಕೇರಿಯಲ್ಲಿ ದಿಢೀರ್ ಆಗಿ ಮಳೆ ಆರ್ಭಟಿಸಿದ ಕಾರಣ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ರಸ್ತೆಗಳೆಲ್ಲಾ ಮಳೆಯ ನೀರಿನಿಂದ ಆವೃತಗೊಂಡಿದ್ದವು.
ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ.
ಕಾಫಿ ಹೂವಿಗೆ ಮಳೆಯ ಅಗತ್ಯವಿದ್ದು, ಜೋರು ಮಳೆಯಿಂದ ರೈತರು ಸಂತಸಗೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಕಾಫಿ ಹೂವು ಅರಳುವ ಸಾಧ್ಯತೆಯಿದೆ.
ವಿವಿಧೆಡೆ ವರ್ಷಧಾರೆ
ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಜೋರಾಗಿ ಮಳೆ ಸುರಿಯಿತು. ಮಧ್ಯಾಹ್ನದಿಂದಲೂ ಮೋಡಕವಿದ ವಾತಾವರಣ ಇತ್ತು.
ಮಧ್ಯಾಹ್ನ 3.30ಕ್ಕೆ ತುಂತುರು ಹನಿಯಿಂದ ಆರಂಭಗೊಂಡ ಮಳೆ ನಂತರ ಜೋರಾಗಿ ಅರ್ಧ ತಾಸಿಗೂ ಹೆಚ್ಚುಕಾಲ ಸುರಿಯಿತು.
ಹೆಬ್ಬಾಲೆ, ಕೂಡಿಗೆ, ಗುಡ್ಡೆಹೊಸೂರು, ಸಿದ್ದಲಿಂಗಪುರ, ತೊರೆನೂರು, ಶಿರಂಗಾಲ ಮತ್ತಿತರ ಗ್ರಾಮಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಬಂದಿತು.
ಸಾಧಾರಣ ಮಳೆ
ಸುಂಟಿಕೊಪ್ಪ: ಪಟ್ಟಣ ಸೇರಿದಂತೆ ಹೋಬಳಿಗಳಲ್ಲಿ ಗುರುವಾರ ಸಂಜೆ ಸಾಧಾರಣ ಮಳೆ ಸುರಿಯಿತು.
ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಕೆದಕಲ್, ಚಿಕ್ಲಿಹೊಳೆ, ಬಾಳೆಕಾಡು ಮೊದಲಾದೆಡೆ ಮಳೆ ಬಿದ್ದಿದೆ