ಲಖನೌ: ಉತ್ತರ ಪ್ರದೇಶದ ಅಲಿಗಡ ದಲ್ಲಿ ಕಚೋರಿ, ಸಮೋಸ ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಗೆ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಅಲಿಗಡದ ಸೀಮಾ ಟಾಕೀಸ್ ಸಮೀಪದಲ್ಲಿರುವ ‘ಮುಕೇಶ್ ಕಚೋರಿವಾಲಾ’ ಅಂಗಡಿಯ ಮಾಲೀಕ ಮುಕೇಶ್ ಕುಮಾರ್ 12 ವರ್ಷಗಳಿಂದ ಈ ವ್ಯಾಪಾರ ಮಾಡುತ್ತಿದ್ದಾರೆ. ಕಚೋರಿ, ಸಮೋಸ ರುಚಿಗೆ ಮಾರುಹೋದ ಗ್ರಾಹಕರು ದಿನವಿಡೀ ಅಂಗಡಿ ಮುಂದೆ ನೆರೆದಿರುತ್ತಾರೆ.
ಈಚೆಗೆ ಇವರ ವ್ಯಾಪಾರ ಕುರಿತು ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿತ್ತು. ಇದಾದ ಬಳಿಕ ಮುಕೇಶ್ ಅಂಗಡಿ ಮೇಲೆ ಇಲಾಖೆ ಅಧಿಕಾರಿಗಳು ನಿಗಾ ಇರಿಸಿದ್ದರು.
‘ಸಮೀಪದ ಅಂಗಡಿ ಬಳಿ ಕುಳಿತು, ಮುಕೇಶ್ ನಡೆಸುವ ವ್ಯಾಪಾರವನ್ನು ದಿನವಿಡೀ ಗಮನಿಸಿದೆವು. ಐದಾರು ದಿನ ಈ ರೀತಿ ನಿಗಾ ಇರಿಸಿದ ಬಳಿಕ ವಾರ್ಷಿಕ ₹60 ಲಕ್ಷದಿಂದ ₹1 ಕೋಟಿ ವಹಿವಾಟು ನಡೆಯುತ್ತಿದೆ ಎಂದು ಅಂದಾಜಿಸಲಾಯಿತು’ ಎಂದು ತೆರಿಗೆ ಇಲಾಖೆಯ ವಿಶೇಷ ತನಿಖಾ ದಳದ (ಎಸ್ಐಬಿ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿಎಸ್ಟಿ ಅಡಿ ನೋಂದಾಯಿಸಿಕೊಳ್ಳದೆ ಇರುವುದಕ್ಕೆ ಮತ್ತು ತೆರಿಗೆ ಪಾವತಿಸದೆ ಇರುವುದಕ್ಕಾಗಿ ಅವರಿಗೆ ಇಲಾಖೆ ನೋಟಿಸ್ ನೀಡಿದೆ.
‘ಮಾಹಿತಿ ಇರಲಿಲ್ಲ’: ‘ಇಂತಹ ನಿಯಮ ಅನುಸರಿಸುವುದು ಅವಶ್ಯ ಎಂದು ನನಗೆ ಯಾರೂ ಈ ತನಕ ತಿಳಿಸಿಲ್ಲ. ಜೀವನ ನಡೆಸುವುದಕ್ಕಾಗಿ ಕಚೋರಿ, ಸಮೋಸಾ ಮಾರುತ್ತೇನೆ’ ಎಂದು ಮುಕೇಶ್ ಪ್ರತಿಕ್ರಿಯಿಸಿದ್ದಾರೆ.
‘ಮುಕೇಶ್ ತಮ್ಮ ಆದಾಯದ ಮಾಹಿತಿ ನೀಡಿದ್ದಾರೆ. ತಾವು ಬಳಸುವ ಕಚ್ಚಾ ಉತ್ಪನ್ನ, ಎಣ್ಣೆ, ಅಡುಗೆ ಅನಿಲದ ವೆಚ್ಚಗಳ ವಿವರ ನೀಡಿದ್ದಾರೆ. ಅವರು ಜಿಎಸ್ಟಿ ಅಡಿ ನೋಂದಾಯಿಸಿಕೊಂಡು, ಒಂದು ವರ್ಷದ ತೆರಿಗೆ ಪಾವತಿಸಬೇಕು’ ಎಂದು ಎಸ್ಐಬಿ ಅಧಿಕಾರಿ ಹೇಳಿದ್ದಾರೆ.