ಮುಂಬೈ : ಚಿತ್ರನಟಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದ ಮಾತೋಂಡ್ಕರ್, ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಎದುರು ಕೇವಲ 2,41,431 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡಿದ್ದರು. ಇದರಿಂದ ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಒಳಗಾಗಿತ್ತು.
‘ಕಾಂಗ್ರೆಸ್ನಲ್ಲಿರುವ ಆಂತರಿಕ ರಾಜಕೀಯದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ’ ಎಂದು ಅವರು ಮಂಗಳವಾರ ಹೇಳಿದ್ದಾರೆ.
‘ಕಾಂಗ್ರೆಸ್ ಕೇವಲ ಆಂತರಿಕ ರಾಜಕೀಯದ ವಿರುದ್ಧ ಹೋರಾಡುವ ಸಾಧನವಾಗಿ ನನ್ನನ್ನು ಬಳಸಿಕೊಳ್ಳಲು ಮುಂದಾಗಿತ್ತು. ನನ್ನ ರಾಜಕೀಯ ಮತ್ತು ಸಾಮಾಜಿಕ ಸಂವೇದನೆಯನ್ನು ಒಪ್ಪಿಕೊಳ್ಳಲಿಲ್ಲ’ ಎಂದು ಅವರು ತಮ್ಮ ನಿರ್ಧಾರ ಸಮರ್ಥಿಸಿ ಕೊಂಡಿದ್ದಾರೆ. ‘ಮುಂಬೈ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸಂಜಯ್ ನಿರುಪಮ್ ಅವರ ಆಪ್ತರಾದ ಸಂದೇಶ್ ಕೊಂಡ್ವಿಲ್ಕರ್ ಮತ್ತು ಭೂಷಣ್ ಪಾಟೀಲ್ ಅವರ ವರ್ತನೆ ಬಗ್ಗೆ ಮೇ 16 ರಂದು ಅಂದಿನ ಅಧ್ಯಕ್ಷ ಮಿಲಿಂದ್ ದೇವ್ರಾ ಅವರಿಗೆ ಪತ್ರ ಬರೆದಿದ್ದೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇದರಿಂದ ಬೇಸತ್ತು ರಾಜೀನಾಮೆ ನೀಡುವ ಬಗ್ಗೆ ಆಲೋಚನೆ ಮಾಡಿದೆ’ ಎಂದು ಮಾತೋಂಡ್ಕರ್ ಹೇಳಿದ್ದಾರೆ.