ನವದೆಹಲಿ (ಪಿಟಿಐ): ಕೋವಿಡ್–19 ಭೀತಿಯ ಕಾರಣ ಮುಚ್ಚಲ್ಪಟಿರುವ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರಗಳನ್ನು(ಸಾಯ್) ಸೋಂಕು ಪೀಡಿತರಿಗೆ ‘ಪ್ರತ್ಯೇಕವಾಸ’ (ಕ್ವಾರೆಂಟೈನ್) ಸೌಕರ್ಯಕ್ಕೆ ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ತಿಳಿಸಿದೆ.
ಆರೋಗ್ಯ ಸಚಿವಾಲಯದ ಮನವಿಯಂತೆ ಸಾಯ್ನ ಪ್ರಾದೇಶಿಕ ಕೇಂದ್ರಗಳು, ಕ್ರೀಡಾಂಗಣಗಳು ಹಾಗೂ ವಸತಿನಿಲಯಗಳನ್ನು ‘ಪ್ರತ್ಯೇಕವಾಸ’ದ ಉಪಯೋಗಕ್ಕೆ ನೀಡಲಾಗುತ್ತಿದೆ.
‘ಇದೊಂದು ಬಿಕ್ಕಟ್ಟಿನ ಸ್ಥಿತಿ. ಸರ್ಕಾರದ ಅಗತ್ಯಕ್ಕೆ ತಕ್ಕಂತೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ. ಸಾಯ್ ಕೇಂದ್ರಗಳು ಸಾರ್ವಜನಿಕ ಆಸ್ತಿಯಾಗಿದ್ದು, ‘ಪ್ರತ್ಯೇಕವಾಸ’ಕ್ಕೆ ನೀಡಲು ನಿರ್ಧರಿಸಲಾಗಿದೆ’ ಎಂದು ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯಾ ಹೇಳಿದ್ದಾರೆ.
ಆರೋಗ್ಯ ಸಚಿವಾಲಯ ಯಾವಾಗ ಇವುಗಳನ್ನು ಉಪಯೋಗಿಸಿಕೊಳ್ಳಲಿದೆ ಎಂಬುದನ್ನು ಜುಲಾನಿಯಾ ನಿಖರವಾಗಿ ಹೇಳಿಲ್ಲ.ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಸಾಯ್ನ 10 ಪ್ರಾದೇಶಿಕ ಕೇಂದ್ರಗಳು ಹಾಗೂ ಐದು ಕ್ರೀಡಾಂಗಣಗಳಿವೆ. ಇವುಗಳಲ್ಲಿ ಕನಿಷ್ಠ 2000 ಸೋಂಕಿತರಿಗೆ ‘ಪ್ರತ್ಯೇಕವಾಸ’ದ ಸೌಕರ್ಯ ನೀಡಬಹುದು ಎಂಬುದು ಸರ್ಕಾರದ ಅಂದಾಜು.
ಕೊರೊನಾ ಭೀತಿಯ ಕಾರಣ ಸಾಯ್ನ ಎಲ್ಲ ಶಿಬಿರಗಳಲ್ಲಿ ತರಬೇತಿಯನ್ನು ನಿಲ್ಲಿಸಲಾಗಿದೆ. ಅಥ್ಲೀಟುಗಳನ್ನು ಮನೆಗೆ ಕಳುಹಿಸಲಾಗಿದೆ. ಒಲಿಂಪಿಕ್ಸ್ಗಾಗಿ ತರಬೇತಿ ನಡೆಸುತ್ತಿರುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮುಂದುವರಿಯಲು ಅವಕಾಶ ನೀಡಲಾಗಿದೆ.