ಮುಂಬೈ/ತಿರುವನಂತಪುರ: ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ.
ಮಲೇಷ್ಯಾದ ಕ್ವಾಲಾಲಂಪುರದಿಂದ 225 ಭಾರತೀಯರನ್ನು ಒಳಗೊಂಡ ಏರ್ ಇಂಡಿಯಾ ವಿಮಾನ ಬುಧವಾರ ಬೆಳಿಗ್ಗೆ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಅದೇ ರೀತಿ ಕತಾರ್ನ ದೋಹಾದಿಂದ ಭಾರತೀಯರನ್ನು ಒಳಗೊಂಡ ಏರ್ ಇಂಡಿಯ ಎಕ್ಸ್ಪ್ರೆಸ್ ಕೇರಳದ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
ಬಾಂಗ್ಲಾದೇಶದಲ್ಲಿದ್ದ 169 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಏರ್ ಇಂಡಿಯಾ ವಿಮಾನ ಮೂಲಕ ಮಂಗಳವಾರ ಕರೆತರಲಾಗಿತ್ತು. ವಂದೇ ಭಾರತ್ ಮಿಷನ್ ಆರಂಭಗೊಂಡ ಬಳಿಕ ಈವರೆಗೆ 6,037 ಭಾರತೀಯರನ್ನು ಏರ್ ಇಂಡಿಯಾ ವಿಮಾನಗಳ ಮೂಲಕ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಮೇ 7ರಂದು ಈ ಕಾರ್ಯಾಚರಣೆ ಆರಂಭಗೊಂಡಿದೆ.
ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನ 64 ವಿಮಾನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಅಮೆರಿಕ, ಬ್ರಿಟನ್, ಬಾಂಗ್ಲಾದೇಶ, ಸಿಂಗಾಪುರ, ಸೌದಿ ಅರೇಬಿಯಾ, ಕುವೈತ್, ಫಿಲಿಪ್ಫೀನ್ಸ್, ಯುಎಇ ಮಲೇಷ್ಯಾದಿಂದ 14,800 ಭಾರತೀಯರನ್ನು ಮೊದಲ ಹಂತದಲ್ಲಿ ಕರೆತರಲಾಗುತ್ತಿದೆ.