ವಾರಣಾಸಿ: ರಾಜ್ಯಗಳಲ್ಲಿ ವಾಯು ಮಾಲಿನ್ಯ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲೂ ವಾಯುಮಾಲಿನ್ಯ ಮಿತಿಮೀರಿದ್ದು, ದೀಪಾವಳಿಯ ನಂತರ ವಾರಣಾಸಿಯ ಗಾಳಿಯಲ್ಲಿ ‘ಪಿಎಂ 2.5’ ಕಣಗಳು ಪತ್ತೆಯಾಗಿದ್ದು ಇದೀಗ 500ಕ್ಕೆ ತಲುಪಿವೆ.
ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ಕೆಡುತ್ತಿದ್ದು, ಪವಿತ್ರ ಸ್ಥಳಗಳಲ್ಲಿ ವಿಷಯುಕ್ತ ಗಾಳಿಯಿಂದ ಕಾಪಾಡಲು ದೇವರ ವಿಗ್ರಹಗಳಿಗೆ ಮಾಸ್ಕ್ ಧರಿಸಲಾಗುತ್ತಿದೆ. ಸಿಗ್ರಾದ ಪ್ರಸಿದ್ಧ ಶಿವ-ಪಾರ್ವತಿ ದೇಗುಲಗಲ್ಲಿ ಶಿವ, ಪಾರ್ವತಿ, ಕಾಳಿ ಮತ್ತು ಸಾಯಿ ಬಾಬಾ ವಿಗ್ರಹಗಳಿಗೆ ಮಾಸ್ಕ್ ಧರಿಸಲಾಗಿದೆ.
‘ವಾರಾಣಸಿಯು ನಮ್ಮ ನಂಬಿಕೆಯ ಕ್ಷೇತ್ರವಾಗಿದೆ. ಇಲ್ಲಿನ ವಿಗ್ರಹಗಳನ್ನು ಜೀವಂತ ದೇವರುಗಳೆಂದೇ ಭಾವಿಸಿ ಅವರನ್ನು ಸಂತೋಷದಿಂದ ಮತ್ತು ಆರಾಮವಾಗಿರಿಸಲು ನಾವು ಶ್ರಮಿಸುತ್ತೇವೆ. ಬೇಸಿಗೆ ಕಾಲದಲ್ಲಿ ಪ್ರತಿಮೆಗಳನ್ನು ತಣ್ಣಗಿಡಲು ಶ್ರೀಗಂಧವನ್ನು ಲೇಪಿಸುತ್ತೇವೆ. ಚಳಿಗಾಲದಲ್ಲಿ ಬೆಚ್ಚಗಿರಲು ಉಣ್ಣೆಯ ಬಟ್ಟೆಯಿಂದ ಸುತ್ತುತ್ತೇವೆ. ಅದೇ ರೀತಿ ಮಾಲಿನ್ಯದಿಂದ ರಕ್ಷಿಸಲು ಅವುಗಳ ಮುಖಕ್ಕೆ ಮಾಸ್ಕ್ ಹಾಕಲಾಗಿದೆ‘ ಎಂದು ಶಿವ-ಪಾರ್ವತಿ ದೇಗುಲದ ಅರ್ಚಕ ಹರೀಶ್ ಮಿಶ್ರಾ ಹೇಳಿದ್ದಾರೆ.
ಆದರೆ ಕಾಳಿ ದೇವಿಯ ಮುಖವನ್ನು ಮುಚ್ಚುವುದು ಬೇಸರದ ಸಂಗತಿ. ಆಕೆ ಕೋಪೋದ್ರಿಕ್ತ ದೇವಿ ಮತ್ತು ಆಕೆಯು ಹೊರತೆಗೆದಿರುವ ನಾಲಿಗೆಯನ್ನು ಮುಚ್ಚುವಂತಿಲ್ಲ. ಹಾಗಾಗಿ ಆಕೆಯ ಮುಖವನ್ನು ಮುಚ್ಚದಿರಲು ನಾವು ನಿರ್ಧರಿಸಿದ್ದೇವೆ. ತಮ್ಮ ದೇವರುಗಳ ಮುಚ್ಚಿದ ಮುಖವನ್ನು ನೋಡಲು ಹಲವಾರು ಭಕ್ತರು ಈಗಾಗಲೇ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ಅವರು ಕೂಡ ಈಗಾಗಲೇ ಮುಖಕ್ಕೆ ಮಾಸ್ಕ್ಗಳನ್ನು ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.