ಮುಂಬೈ: ಉದ್ಯಮಿ ವಿಜಯ ಮಲ್ಯ ಅವರನ್ನು ‘ದೇಶಕ್ಕೆ ಬೇಕಾಗಿರುವ ಆರ್ಥಿಕ ಅಪರಾಧಿ’ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ಕುರಿತು ಅಂತಿಮ ತೀರ್ಪು ನೀಡುವುದನ್ನು ಜನವರಿ 5ಕ್ಕೆ ನಿಗದಿಪಡಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯ, ಈ ಅರ್ಜಿಯ ಕುರಿತು ಜಾರಿ ನಿರ್ದೇಶನಾಲಯ ಮತ್ತು ಮಲ್ಯ ಪರ ವಕೀಲರ ವಾದ–ಪ್ರತಿವಾದಗಳನ್ನು ಆಲಿಸಿದೆ. ಈ ಮೊದಲು ಬುಧವಾರವೇ ತೀರ್ಪು ನೀಡುವುದಾಗಿ ತಿಳಿಸಿದ್ದ ನ್ಯಾಯಾಲಯ ಜನವರಿ 5ಕ್ಕೆ ನಿಗದಿಪಡಿಸಿತು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಂ.ಎಸ್. ಅಝ್ಮಿ ಅವರು ವಿಶೇಷ ನ್ಯಾಯಾಲಯಕ್ಕೂ ನ್ಯಾಯಾಧೀಶರಾಗಿದ್ದಾರೆ. ಹೊಸ ಕಾನೂನು ಪ್ರಕಾರ, ಆರ್ಥಿಕ ಅಪರಾಧಿ ಎಂದು ಘೋಷಿಸುವ ಅಧಿಕಾರವನ್ನು ವಿಶೇಷ ನ್ಯಾಯಾಲಯಕ್ಕೆ ನೀಡಲಾಗಿದೆ. ಜತೆಗೆ ಆ ವ್ಯಕ್ತಿಯ ಆಸ್ತಿಯನ್ನು ವಶಪಡಿಸಿಕೊಳ್ಳಬಹುದಾಗಿದೆ.
ದೇಶಕ್ಕೆ ಬೇಕಾಗಿರುವ ಆರ್ಥಿಕ ಅಪರಾಧಿ ಕುರಿತಂತೆ ಇತ್ತೀಚೆಗೆ ಹೊರಡಿಸಲಾದ ಸುಗ್ರೀವಾಜ್ಞೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ₹12,500 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವಂತೆ ಕೋರಿದೆ.
ಮಲ್ಯ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಎರಡು ಆರೋಪಪಟ್ಟಿಗಳನ್ನು ದಾಖಲಿಸಿದೆ. ಆರ್ಥಿಕ ಅಪರಾಧಿ ಎಂದು ವಿಶೇಷ ನ್ಯಾಯಾಲಯ ಘೋಷಿಸಿದರೆ ಜಾರಿ ನಿರ್ದೇಶನಾಲಯ ಆಸ್ತಿಯನ್ನು ವಶಪಡಿಸಿಕೊಳ್ಳಬಹುದಾಗಿದೆ. ಮಲ್ಯ ಪರ ಅಮಿತ್ ದೇಸಾಯಿ ವಾದ ಮಂಡಿಸಿದ್ದು, ಪಿಎಂಎಲ್ಎ ಕಾಯ್ದೆ ಕ್ರೂರವಾಗಿದೆ ಎಂದು ಪ್ರತಿಪಾದಿಸಿದ್ದಾರೆ.