ನವದೆಹಲಿ: ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಎಲ್ಲರೂ ಜತೆಯಾಗಿ ನಿಲ್ಲೋಣ ಎಂದು ಸರ್ವಪಕ್ಷಗಳ ಸಭೆ ನಿರ್ಣಯ ಕೈಗೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಪಲ್ವಾಮದಲ್ಲಿ ಗುರುವಾರ ನಡೆದ ಉಗ್ರ ದಾಳಿಯಲ್ಲಿ ಸಿಆರ್ಪಿ ಎಫ್ನ 40 ಯೋಧರು ಹುತಾತ್ಮರಾದ ಹಿನ್ನಲೆಯಲ್ಲಿ ಶನಿವಾರ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಎಲ್ಲ ರೀತಿಯಲ್ಲಿನ ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಗಡಿಯಿಂದಾಚೆ ದೊರಕುವ ಬೆಂಬಲವನ್ನು ಖಂಡಿಸುತ್ತೇವೆ ಎಂದು ಪಾಕಿಸ್ತಾನದ ಹೆಸರು ಉಲ್ಲೇಖಿಸದೆ ಸರ್ವಪಕ್ಷ ಸಭೆಯಲ್ಲಿ ಠರಾವು ಮಂಡಿಸಲಾಗಿದೆ.
ಸರ್ಕಾರ ಮುಂದಿನ ಹೆಜ್ಜೆಗಳ ಬಗ್ಗೆ ಸಭೆಯಲ್ಲಿ ಎಲ್ಲ ಪಕ್ಷದ ಮುಖಂಡರಿಗೂ ವಿವರಣೆ ನೀಡಲಾಗಿದೆ.
Home Minister @rajnathsingh chairs all party meeting on #PulwamaAttacks. Resolution passed by all party meeting. @IndianExpress pic.twitter.com/lgBivdUN64
— rahul tripathi (@rahultripathi) February 16, 2019
ಕಳೆದ ಮೂರು ದಶಕಗಳಲ್ಲಿ ಭಾರತ ಗಡಿಯಿಂದಾಚೆಗಿರುವ ಭಯೋತ್ಪಾದನೆ ಪಿಡುಗನ್ನು ಎದುರಿಸುತ್ತಿದೆದೇಶದೊಳಗಿನ ಉಗ್ರ ಕೃತ್ಯಗಳಿಗೆಗಡಿಯಿಂದಾಚೆಗಿನ ಶಕ್ತಿಗಳು ಬೆಂಬಲ ನೀಡುತ್ತಿವೆ. ಈ ಸವಾಲಿಗೆ ಭಾರತ ದಿಟ್ಟತನದಿಂದ ಉತ್ತರ ನೀಡಿದೆ. ಈ ಸವಾಲುಗಳನ್ನು ಎದುರಿಸುವುದಕ್ಕಾಗಿ ಇಡೀ ದೇಶ ಒಕ್ಕೊರಲಿನಿಂದ ದನಿಗೂಡಿಸಿದೆ. ಭಯೋತ್ಪಾದೆನೆ ವಿರುದ್ಧ ಹೋರಾಡಲು ಮತ್ತು ನಮ್ಮ ದೇಶದ ಐಕ್ಯತೆಯನ್ನು ಕಾಪಾಡಲು ನಾವೆಲ್ಲರೂ ಜತೆಯಾಗಿ ನಿಂತಿದ್ದೇವೆ ಎಂದು ಸಭೆಯಲ್ಲಿನ ನಿರ್ಣಯದಲ್ಲಿ ಹೇಳಲಾಗಿದೆ.
ಕಾಶ್ಮೀರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅಲ್ಲಿನ ಪರಿಸ್ಥಿತಿಯನ್ನು ಸಭೆಯಲ್ಲಿ ವಿವರಿಸಿದ್ದಾರೆ. ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಜ್ಯೋತಿರಾದಿತ್ಯ ಸಿಂಧ್ಯಾ,ಟಿಎಂಸಿ ಪಕ್ಷದ ಸುಧೀಪ್ ಬಂಡೋಪಧ್ಯಾಯ್ ಮತ್ತು ಡೆರೆಕ್ ಓ ಬ್ರೇನ್, ಶಿವಸೇನೆಯ ಸಂಜಯ್ ರೌತ್, ಜಿತೇಂದ್ರ ರೆಡ್ಡಿ (ಟಿಆರ್ಎಸ್), ಡಿ. ರಾಜಾ (ಸಿಪಿಐ), ಫರೂಕ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್) , ರಾಮ್ ವಿಲಾಸ್ ಪಾಸ್ವಾನ್ (ಎಲ್ಜೆಪಿ), ನರೇಶ್ ಗುಜ್ರಾಲ್ (ಅಕಾಲಿದಳ), ಉಪೇಂದ್ರ ಕುಶ್ವಾಹ ಮತ್ತು ಜೈ ಪ್ರಕಾಶ್ ನಾರಾಯಣ್ ಯಾದವ್ (ಆರ್ಎಲ್ಎಸ್ಪಿ) ಭಾಗಿಯಾಗಿದ್ದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಭಯೋತ್ಪಾದನೆ ವಿರುದ್ಧದ ಸರ್ಕಾರದ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ.ದೇಶದ ರಕ್ಷಣೆ ಮತ್ತು ಐಕ್ಯತೆಗಾಗಿ ನಾವು ಸರ್ಕಾರ ಮತ್ತು ರಕ್ಷಣಾ ಪಡೆಯ ಜತೆ ನಿಲ್ಲುತ್ತೇವೆ. ಕಾಶ್ಮೀರ ಅಥವಾ ದೇಶದ ಬೇರೆ ಯಾವುದೇ ರಾಜ್ಯವಿರಲಿ ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕಾಗಿ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.