ನವದೆಹಲಿ: ಎಷ್ಟು ಸಮಯದವರೆಗೆ ಲಾಕ್ಡೌನ್ ಮುಂದುವರಿಸಬೇಕು ಎಂಬುದನ್ನು ನಿರ್ಧರಿಸಲು ಸರ್ಕಾರ ಅನುಸರಿಸುವ ಮಾನದಂಡವೇನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ಮೇ 17ರ ಮುಂದೆ ಏನು ಎಂದು ಪ್ರಶ್ನಿಸಿದ್ದಾರೆ. ಮೂರನೇ ಅವಧಿಯ ಲಾಕ್ಡೌನ್ ಮೇ 17ಕ್ಕೆ ಕೊನೆಗೊಳ್ಳಲಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಕ್ಷದ ಮಾಜಿ ಅಧ್ಯಕ್ಷರಾಹುಲ್ ಗಾಂಧಿ ಸಹ ಸಭೆಯಲ್ಲಿ ಹಾಜರಿದ್ದರು.
ಮೇ 17 ಬಳಿಕ ಹೇಗೆ ಮತ್ತು ಏನು ಎಂದು ಪ್ರಶ್ನಿಸಿರುವ ಸೋನಿಯಾ, ಲಾಕ್ಡೌನ್ ಮುಂದುವರಿಸುವ ನಿರ್ಧಾರ ಕೈಗೊಳ್ಳಲು ಸರ್ಕಾರ ಅನುಸರಿಸುವ ಮಾನದಂಡವೇನು ಎಂದು ಪ್ರಶ್ನಿಸಿರುವುದಾಗಿ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.
ಎಲ್ಲ ಸಮಸ್ಯೆಗಳ ಹೊರತಾಗಿಯೂ ಉತ್ತಮವಾಗಿ ಗೋಧಿ ಬೆಳೆಯುವ ಮೂಲಕ ಆಹಾರ ಭದ್ರತೆ ಖಾತ್ರಿಪಡಿಸಿದ ಪಂಜಾಬ್ ಮತ್ತು ಹರಿಯಾನದ ರೈತರಿಗೆ ಸೋನಿಯಾ ಧನ್ಯವಾದ ಸಮರ್ಪಿಸಿದ್ದಾರೆ.
ಮೂರನೇ ಹಂತದ ಲಾಕ್ಡೌನ್ ಮುಗಿದ ಬಳಿಕ ಏನಾಗಲಿದೆ? ಇದನ್ನು ನಾವು ತಿಳಿಯಬೇಕಿದೆ ಎಂದು ಮನಮೋಹನ್ ಸಿಂಗ್ ಸಹ ಹೇಳಿದ್ದಾರೆ.
‘ಸೋನಿಯಾ ಅವರು ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ಲಾಕ್ಡೌನ್ನಿಂದ ದೇಶವನ್ನು ಹೊರತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆ ಏನು ಎಂಬುದನ್ನು ಮುಖ್ಯಮಂತ್ರಿಗಳು ಪ್ರಶ್ನಿಸಬೇಕಿದೆ’ ಎಂದೂ ಮನಮೋಹನ್ ಸಿಂಗ್ ಹೇಳಿದ್ದಾರೆ.