ನವದೆಹಲಿ: ಚೀನಾ ಗಡಿ ಪದೇಶಗಳನ್ನು ರಕ್ಷಿಸಿಕೊಳ್ಳುವ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಿ ಮಾಡಿಕೊಳ್ಳಬಾರದು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಲಡಾಖ್ನಲ್ಲಿ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಅವರು ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.
ಲಡಾಖ್ನಲ್ಲಿ ಹುತಾತ್ಮರಾದ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಲು ಕಾಂಗ್ರೆಸ್ ‘ಸ್ಪೀಕ್ ಅಪ್ ಫಾರ್ ಅವರ ಜವಾನ್ಸ್’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನದ ಭಾಗವಾಗಿ ಹೊರಡಿಸಲಾದವಿಡಿಯೊ ಸಂದೇಶದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಅವರ ಮಾತಿನಂತೆ ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲ ಎಂದಾದರೆ ದೇಶದ ಯೋಧರು ಹೇಗೆ ಹುತಾತ್ಮರಾದರು ಎಂದು ಸೋನಿಯಾ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ದೇಶದ ಜನರು ಉತ್ತರ ಬಯಸುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
‘ಸತ್ಯ ಹೇಳಿ’– ರಾಹುಲ್:‘ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆಯೇ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯವನ್ನೇ ಹೇಳಬೇಕು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪುನಃ ಒತ್ತಾಯಿಸಿದ್ದಾರೆ.
ಮೋದಿ ಅವರು ಚೀನಾ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿಲ್ಲ ಎಂದಿದ್ದಾರೆ. ಆದರೆ, ಸ್ಯಾಟ್ಲೈಟ್ ದೃಶ್ಯಗಳು ಬೇರೆಯದನ್ನೇ ಹೇಳುತ್ತಿವೆ. ಪ್ರಧಾನಿಯ ಹೇಳಿಕೆಯ ಲಾಭವನ್ನು ಚೀನಾ ಪಡೆದುಕೊಳ್ಳುವ ಸಂಭವವಿದೆ ಎಂದು ಹೇಳಿದ್ದಾರೆ.