ಹೈದರಾಬಾದ್: ‘ಎಎನ್–32 ವಿಮಾನ ಪತನಕ್ಕೆ ಸೂಕ್ತ ಕಾರಣಗಳನ್ನು ಪತ್ತೆ ಮಾಡಲಾಗುವುದು. ಈ ರೀತಿಯಘಟನೆ ಮರುಕಳಿಸದ್ದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೊಆ ಶನಿವಾರ ತಿಳಿಸಿದ್ದಾರೆ.
‘ವಿಮಾನ ಪತನಕ್ಕೆ ನಿಖರ ಕಾರಣ ತಿಳಿಯಲು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಮತ್ತು ವಿಮಾನ ದತ್ತಾಂಶವನ್ನು ಸಂಗ್ರಹಿಸಿದ್ದೇವೆ. ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ವಿಮಾನ ಚಲಾಯಿಸುವುದು ಪೈಲಟ್ಗಳಿಗೆ ದುಃಸ್ವಪ್ನದಂತೆಯೇ ಕಾಡುತ್ತದೆ. ಕ್ಷಣ ಕ್ಷಣಕ್ಕೂ ಬದಲಾಗುವ ವಾತಾವರಣ ವಿಮಾನಗಳ ಸಂಚಾರಕ್ಕೆ ತೊಡಕಾಗುತ್ತದೆ ಎಂದಿದ್ದಾರೆ.
‘ಈ ಪ್ರಕರಣದ ಸಮಗ್ರವಾದ ವಿವರಗಳನ್ನು ಪಡೆಯಲಾಗುತ್ತಿದೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು’ ಎಂದರು.
ರಷ್ಯಾ ನಿರ್ಮಿತ ಎಎನ್–32 ವಿಮಾನವು ಅಸ್ಸಾಂನ ಜೋರ್ಹತ್ನಿಂದ ಮೆಚುಕಾ ಎಂಬಲ್ಲಿಗೆ ತೆರಳುತ್ತಿತ್ತು. ಆದರೆ ಟೇಕ್ಆಫ್ ಆದ ಅರ್ಧ ಗಂಟೆಯ ಹೊತ್ತಿಗೆ ವಿಮಾನವು ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು.
ವಾಯುಪಡೆಯ ಹೆಲಿಕಾಪ್ಟರ್ ಹಾಗೂ ಸೇನಾ ಸಿಬ್ಬಂದಿ ಸತತ ಕಾರ್ಯಾಚರಣೆಯಿಂದ ಕಳೆದ ಮಂಗಳವಾರ ಅರುಣಾಚಲ ಪ್ರದೇಶದ ಗಡಿ ಭಾಗ ಸಿಯಾಂಗ್ ಜಿಲ್ಲೆಯಲ್ಲಿ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಲಾಗಿತ್ತು. ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದರು.