ಶಬರಿಮಲೆ/ಪಂಪಾ: ಸುಪ್ರೀಂ ಕೋರ್ಟ್ ತೀರ್ಪು ಮತ್ತು ಭಾರಿ ಪೊಲೀಸ್ ಬೆಂಗಾವಲಿನ ಹೊರತಾಗಿಯೂ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿ ಇತಿಹಾಸ ಸೃಷ್ಟಿಸುವ ಮಹಿಳೆಯರ ಕನಸು ಕೊನೆಗೂ ನನಸಾಗಲಿಲ್ಲ. ಐದು ದಿನಗಳ ವಿಶೇಷ ಪೂಜೆಯ ನಂತರ ಸೋಮವಾರ ರಾತ್ರಿ 10 ಗಂಟೆಗೆ ಅಯ್ಯಪ್ಪ ದೇಗುಲದ ಬಾಗಿಲು ಮುಚ್ಚಿದೆ.
ಕೊನೆಯ ದಿನವಾದರೂ ದೇಗುಲ ಪ್ರವೇಶಿಸುವ ಅವಕಾಶ ದೊರೆಯಬಹುದು ಎಂಬ ಮಹದಾಸೆ ಹೊತ್ತು ನಾನಾ ಕಡೆಯಿಂದ ಬಂದಿದ್ದ ಮಹಿಳೆಯರ ಆಸೆಗೆ ಬಿಜೆಪಿ ಕಾರ್ಯಕರ್ತರು ಮತ್ತು ಪ್ರತಿಭಟನಕಾರರು ತಣ್ಣೀರೆರಚಿದರು.
ಶಬರಿಮಲೆ ಬುಡದಲ್ಲಿರುವ ಪಂಪಾದಿಂದ ಪೊಲೀಸರ ಸರ್ಪಗಾವಲಿನಲ್ಲಿ ಅಯ್ಯಪ್ಪ ದೇಗುಲದತ್ತ ಹೊರಟ ದಲಿತ ಕಾರ್ಯಕರ್ತೆ ಬಿಂದು ಮತ್ತು ಹಲವು ಮಹಿಳೆಯರನ್ನು ಮಾರ್ಗಮಧ್ಯೆದಲ್ಲಿಯೇ ತಡೆದ ಬಿಜೆಪಿ ಕಾರ್ಯಕರ್ತರು ಎಲ್ಲರನ್ನೂ ಮರಳಿ ಕಳಿಸಿದರು.
ಕೊನೆಯ ದಿನ ಭಾರಿ ಸಂಖ್ಯೆಯಲ್ಲಿ ಮಹಿಳೆಯರು, ಭಕ್ತರು ಮತ್ತು ಪ್ರತಿಭಟನಕಾರರು ಸೇರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಶಬರಿಮಲೆ, ಪಂಪಾ, ನಿಲಕ್ಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು.
ಶಬರಿಗಿಯಲ್ಲಿ ಸಾವಿರಾರು ಅಯ್ಯಪ್ಪ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು ಠಿಕಾಣಿ ಹೂಡಿದ್ದರು.
ಪ್ರತಿಭಟನಕಾರರು ಮಾಧ್ಯಮಗಳ ಮೇಲೆ ದಾಳಿ ನಡೆಸುವ ಭೀತಿ ಇರುವ ಕಾರಣ ಪಂಪಾದಲ್ಲಿ ಬಿಡಾರ ಹೂಡಿರುವ ಮಾಧ್ಯಮ ಪ್ರತಿನಿಧಿಗಳನ್ನು ಜಾಗ ಖಾಲಿ ಮಾಡುವಂತೆ ಪೊಲೀಸರು ಮುಂಚಿತವಾಗಿ ಸೂಚನೆ ನೀಡಿದ್ದರು.
ವಿಚಾರಣೆ ದಿನಾಂಕ ನಿರ್ಧಾರ ಇಂದು
ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದ ಸಾಂವಿಧಾನಿಕ ಪೀಠದ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯ ದಿನಾಂಕವನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ಧರಿಸಲಿದೆ.
ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘದ ಅರ್ಜಿ ಸೇರಿದಂತೆ ಒಟ್ಟು 19 ಪುನರ್ ಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿವೆ. ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘದ ಅರ್ಜಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ವಕೀಲ ಮ್ಯಾಥ್ಯೂ ನೆಡುಂಪಾರ ಸೋಮವಾರ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.