ಚೆನ್ನೈ:ತಮಿಳುನಾಡಿನತೂತ್ತುಕುಡಿ ಜಿಲ್ಲೆಯ ಸತ್ತಾನ್ಕುಲಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅಪ್ಪ-ಮಗ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಮದ್ರಾಸ್ ಹೈಕೋರ್ಟ್ನ ಮದುರೈ ನ್ಯಾಯಪೀಠದ ಮುಂದೆ ಮಂಗಳವಾರ ಹಾಜರಾಗಬೇಕಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗುವ ಕೆಲವೇ ಗಂಟೆಗಳಮುನ್ನ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವೈಟಿಂಗ್ ಲಿಸ್ಟ್ನಲ್ಲಿಯೂ ಕಾನ್ಸ್ಟೆಬಲ್ನ್ನು ಅಮಾನತುಮಾಡಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಿ. ಕುಮಾರನ್ ಮತ್ತು ಡಿಎಸ್ಪಿ ಸಿ.ಪ್ರತಾಪನ್ ಅವರನ್ನು ಸರ್ಕಾರ ವೈಟಿಂಗ್ ಲಿಸ್ಟಿನಲ್ಲಿರಿಸಿದ್ದು ಕಾನ್ಸ್ಟೆಬಲ್ ಮಹಾರಾಜನ್ ಅವರನ್ನು ಅಮಾನತುಗೊಳಿಸಿದೆ.
ಇದನ್ನೂ ಓದಿ:ತಮಿಳುನಾಡು: ಕಸ್ಟಡಿ ಸಾವಿಗೆ ತಿರುವು
ಪಿ.ಎನ್. ಪ್ರಕಾಶ್ ಮತ್ತು ಬಿ.ಪುಗಲೆಂದಿ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಲು ಕೆಲವೇ ಗಂಟೆಗಳು ಬಾಕಿ ಇದ್ದಾಗ ಸರ್ಕಾರ ಈ ಆದೇಶ ಹೊರಡಿಸಿದೆ.
ಮಂಗಳವಾರ 10.30ಕ್ಕೆ ಕೋವಿಲ್ಪಟ್ಟಿ ಮೆಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ವಿಭಾಗೀಯ ಪೀಠ ಆದೇಶಿಸಿತ್ತು.
ತಾನು ವಿಚಾರಣೆಗೆ ಹೋದಾಗ ಕಸ್ಟಡಿಯಲ್ಲಿದ್ದ ಜಯರಾಜನ್ ಮತ್ತು ಅವರ ಮಗ ಬೆನಿಕ್ಸ್ಗೆ ಭಾನುವಾರ ಸಂಜೆ ಸತ್ತಾನ್ಕುಲಂ ಪೊಲೀಸ್ ಠಾಣೆಯಲ್ಲಿ ಕಿರುಕುಳ ನೀಡಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿದೆ ಎಂದುಕೋವಿಲ್ಪಟ್ಟಿ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಎಂ.ಎಸ್.ಭಾರತೀದಾಸನ್ ಹೇಳಿದ್ದಾರೆ.
ಪೊಲೀಸ್ ಕಾನ್ಸ್ಟೆಬಲ್ ಮಹಾರಾಜನ್ ಅವರು ಡಿ.ಕುಮಾರ್ (ಎಎಸ್ಪಿ) ಮತ್ತು ಡಿಎಸ್ಪಿ ಸಿ.ಪ್ರತಾಪನ್ ಅವರ ಸಮ್ಮುಖದಲ್ಲೇ ನನ್ನ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ವಿಚಾರಣೆಯ ಭಾಗವಾಗಿ ಪೊಲೀಸರು ಇದನ್ನೆಲ್ಲ ರೆಕಾರ್ಡ್ ಮಾಡಿದ್ದಾರೆ ಎಂದಿದ್ದಾರೆ ಜ್ಯುಡಿಷಿಯಲ್ ಮೆಜಿಸ್ಟ್ರೇಟ್.
ನಿನ್ನಿಂದ ಏನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಜ್ಯುಡಿಷಿಯಲ್ ಮೆಜಿಸ್ಟ್ರೇಟ್ಗೆ ಕಾನ್ಸ್ಟೆಬಲ್ ಹೇಳಿರುವುದಾಗಿ ಸ್ವಯಂಪ್ರೇರಿತ ಅರ್ಜಿಯಲ್ಲಿದೆ. ಈ ಅರ್ಜಿಯ ಪ್ರತಿ ಡೆಕ್ಕನ್ ಹೆರಾಲ್ಡ್ಗೆ ಸಿಕ್ಕಿದೆ.
ಸುಮಾರು ಗಂಟೆಗಳ ಕಾಲ ವಿಚಾರಣೆ ನಡೆದ ಬಳಿಕ ಸೋಮವಾರ ತಮಿಳುನಾಡು ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಮುಕ್ತ ಹಾಗೂ ನಿಷ್ಪಕ್ಷವಾದತನಿಖೆಗಾಗಿಪ್ರಕರಣವನ್ನು ಕೋವಿಲ್ಪಟ್ಟಿ ಪೊಲೀಸ್ ಠಾಣೆಯಿಂದ ಸಿಬಿಐಗೆ ವರ್ಗಾಯಿಸಬೇಕು ಎಂದು ಡಿಜಿಪಿ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ತಮಿಳುನಾಡು ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎಸ್.ಕೆ ಪ್ರಭಾಕರ್ ಸಹಿ ಮಾಡಿದ ಆದೇಶದಲ್ಲಿದೆ.
ಮದ್ರಾಸ್ ಹೈಕೋರ್ಟ್ನಲ್ಲಿ ಮದುರೈ ನ್ಯಾಯಪೀಠ ಗಮನಿಸಿದ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು ಈ ಪ್ರಕರಣದ ಬಗ್ಗೆ ಸ್ವಯಂ ಪ್ರೇರಿತವಾಗಿ ಮುತುವರ್ಜಿ ವಹಿಸಿದ ಕಾರಣ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.