ವಿಶಾಖಪಟ್ಟಣಂ: ಪಕ್ಷದ ನಾಯಕ ಜಗನ್ಮೋಹನ್ ರೆಡ್ಡಿ ಮೇಲೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿ ಪ್ರಕರಣ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷವು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿದೆ.
ಪ್ರಕರಣ ಸಂಬಂಧ ರಿಟ್ ಅರ್ಜಿ ಸಲ್ಲಿರುವ ಹಿರಿಯ ನಾಯಕ ಸುಬ್ಬಾ ರೆಡ್ಡಿ ಅವರು, ದಾಳಿಯ ಹಿಂದೆ ಆಡಳಿತ ಪಕ್ಷ ತೆಲುಗು ದೇಶಂ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಆಂಧ್ರಪ್ರದೇಶ ವಿಧಾನಸಭೆ ವಿರೋಧ ಪಕ್ಷನಾಯಕರಾಗಿರುವ ಜಗನ್ಮೋಹನ್ ರೆಡ್ಡಿ ಅವರ ಮೇಲೆ ವಿಮಾನ ನಿಲ್ದಾಣದ ಹೋಟೆಲ್ನಲ್ಲಿ ಕೆಲಸಮಾಡಿಕೊಂಡಿದ್ದ ಜೆ. ಶ್ರೀನಿವಾಸ ರಾವ್ ಎಂಬಾತ ಹರಿತವಾದ ಆಯುಧದಿಂದ ಗುರುವಾರ ದಾಳಿ ಮಾಡಿದ್ದ. ಈ ವೇಳೆ ಜಗನ್ ಅವರ ಎಡ ತೋಳಿಗೆ ಗಾಯವಾಗಿತ್ತು.
ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಜಗನ್ ಸಮೀಪಕ್ಕೆ ಬಂದಿದ್ದ ದುಷ್ಕರ್ಮಿಯ ಕೃತ್ಯವೆಸಗಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು. ಗಾಯಗೊಂಡಿದ್ದ ರೆಡ್ಡಿ ಅವರಿಗೆ ವಿಮಾನ ನಿಲ್ದಾಣದಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೈದರಾಬಾದ್ನಲ್ಲಿರುವ ಒಮೆಗಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.