ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಿಂದನೆ' ಬಿಜೆಪಿ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ: ರಾಹುಲ್ ಗಾಂಧಿ

Last Updated 25 ಜನವರಿ 2019, 10:14 IST
ಅಕ್ಷರ ಗಾತ್ರ

ಭುವನೇಶ್ವರ: ನಿಂದನೆ ಇದು ಬಿಜೆಪಿಯು ನನಗೆ ಕೊಟ್ಟ ಅತಿ ಅಮೂಲ್ಯ ಉಡುಗೊರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.

ಭುವನೇಶ್ವರದಲ್ಲಿ ಶುಕ್ರವಾರ ನಡೆದ ಸಮೂಹ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ ನಿಲುವನ್ನು ಟೀಕಿಸಿದ್ದಾರೆ.

ರಾಜಕೀಯ ವಿರೋಧಿಗಳಾದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನನ್ನ ಮೇಲೆ ಬೈಗುಳಗಳ ಸುರಿಮಳೆಗೈದಿದೆ. ಇದು ಇವರಿಂದ ನಾನು ಪಡೆದುಕೊಂಡ ಬಹುದೊಡ್ಡ ಕಾಣಿಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೋದಿ ತೆಗಳಿದಾಗ ನಾನೊಮ್ಮೆ ಅವರತ್ತ ನೋಡಿದೆ. ತಕ್ಷಣ ನನಗೆ ಅವರನ್ನು ಅಪ್ಪಿಕೊಳ್ಳಬೇಕೆನಿಸಿತು. ಬಿಜೆಪಿಯು ಕಾಂಗ್ರೆಸ್‌ ಬಗ್ಗೆ ತಲೆಕೆಡಿಸಿಕೊಂಡಿರುವುದು ತಿಳಿದಿದೆ. ಆದರೂ ನಾನು ಅವರ ಮೇಲೆ ಕೋಪಗೊಳ್ಳುವುದಿಲ್ಲ. ಏಕೆಂದರೆನಮ್ಮನ್ನು ರೂಪಿಸಿದ್ದು ಬಿಜೆಪಿಯವರು. ನಾವು ಜನರನ್ನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ.

ಅಜ್ಜಿ ಇಂದಿರಾಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿ ಮಾತು ಮುಂದುವರೆಸಿದ ರಾಹುಲ್, ದ್ವೇಷದಿಂದ ನಾವು ಏನನ್ನೂ ಸಾಧಿಸಲಾಗದು ಎಂದು ಅರಿತಿದ್ದೇವೆ ಎಂದರು.

ರಾಷ್ಟ್ರದ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಬ್ಬಾಳಿಕೆ ನಡೆಯುತ್ತಿದೆ. ಬಿಜೆಪಿಯ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ ಎಂಬ ಸಂಸ್ಥೆಯಿದೆ. ಇದು ರಾಷ್ಟ್ರದಲ್ಲಿರುವ ಏಕೈಕ ಸಂಸ್ಥೆ ಎಂಬ ಭ್ರಮೆಯಲ್ಲಿದೆ. ಇಂತಹ ಯಾವುದೇ ವ್ಯವಸ್ಥಿತ ಆಲೋಚನೆ ದೇಶವನ್ನು ಭೇದಿಸುವುದಿಲ್ಲ. ಅಲ್ಲದೇ ಕಾಂಗ್ರೆಸ್ ದೇಶದಲ್ಲಿ ಯಾವುದೇ ಹಿಡಿತಕ್ಕೊಳಪಡದ ಸ್ವತಂತ್ರ ಸಂಸ್ಥೆಗಳ ನಿರ್ಮಾಣದಲ್ಲಿ ನಂಬಿಕೆ ಇರಿಸಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT