ನವದೆಹಲಿ: ಒಂದು ವೇಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ದೇಶದ ಮೊದಲ ಪ್ರಧಾನಿಯಾಗಿದ್ದರೆ ಕಾಶ್ಮೀರದ ಸಮಸ್ಯೆಯೇ ಉದ್ಘವಿಸುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ರಾಜ್ಯಸಭೆಯಲ್ಲಿ ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ದಾರ್ ಪಟೇಲರು ಕಾಂಗ್ರೆಸ್ ಪಕ್ಷಕ್ಕಾಗಿಯೇ ಬದುಕಿದರು, ಪಕ್ಷಕ್ಕಾಗಿಯೇ ಮಡಿದರು ಎಂದು ಹೇಳಿದರು.
ಗುಜರಾತ್ನಲ್ಲಿ ಚುನಾವಣೆ ನಡೆಯುವಾಗ ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಸರ್ದಾರ್ ಪಟೇಲರು ನೆನಪಾಗುವುದೇ ಇಲ್ಲ.ಎನ್ಡಿಎ ಸರ್ಕಾರ ನಿರ್ಮಿಸಿರುವ ಸರ್ದಾರ್ ಪಟೇಲರ ಪ್ರತಿಮೆಯನ್ನು ಎಲ್ಲ ಕಾಂಗ್ರೆಸ್ ನಾಯಕರು ಒಮ್ಮೆಯಾದರೂ ನೋಡಬೇಕು ಎಂದು ಮನವಿ ಮಾಡಿದರು.
ಯುದ್ಧಭೂಮಿಯಲ್ಲಿ ಸಿಟ್ಟು ತೋರಿಸಲು ಆಗದವರು ಸದನದಲ್ಲಿ ಸಿಟ್ಟು ತೋರಿಸಲು ಮುಂದಾಗುತ್ತಿದ್ದಾರೆ. ದೇಶವು ನಮಗೆ ಸೇವೆ ಮಾಡಲು ಅವಕಾಶ ಕೊಟ್ಟಿದೆ. ನಾನಂತೂ ದೇಶದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ ಕೆಲ ಚುನಾವಣೆಗಳು ದೇಶದ ಮತದಾರರ ಪ್ರೌಢಿಮೆಯನ್ನು ನಿರೂಪಿಸಿವೆ. ಯಾರು ಆಯ್ಕೆಯಾದರು ಎಂಬುದು ಮುಖ್ಯವಲ್ಲ, ಆದರೆ ಮತದಾರರು ಸ್ಥಿರ ಸರ್ಕಾರಗಳನ್ನು ರಚಿಸಲು ಆಶೀರ್ವಾದ ಮಾಡಿದ್ದಾರೆ ಎನ್ನುವುದು ಮುಖ್ಯ ಎಂದು ಮೋದಿ ಹೇಳಿದರು.
ನಮ್ಮ ಚುನಾವಣಾ ಪ್ರಕ್ರಿಕೆಯಗಳು ಸಾಕಷ್ಟು ಸುಧಾರಣೆಗಳನ್ನು ಕಂಡಿದೆ. ಹೀಗಾಗಿಯೇ ನಾವು ಇಂದು ಇಲ್ಲಿದ್ದೇವೆ. ಈ ಹಿಂದೆ ಚುನಾವಣಾ ಹಿಂಸಾಚಾರಗಳು ದಿನಪತ್ರಿಕೆಗಳಲ್ಲಿ ಮುಖ್ಯ ಶೀರ್ಷಿಕೆ ಆಗುತ್ತಿತ್ತು. ಆದರೆ ಈಗ ಮತದಾನದ ಶೇಕಡಾವಾರು ಪ್ರಮಾಣ ಆ ಸ್ಥಾನಕ್ಕೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
‘ದುರಹಂಕಾರದ ಮಾತುಗಳಿಗೆ ಒಂದು ಮಿತಿ ಇರಬೇಕು. ಚುನಾವಣೆ ಫಲಿತಾಂಶ ಪ್ರಕಟವಾದಾಗ ಕೆಲವರು ‘ದೇಶವೇ ಸೋತು ಹೋಯಿತು’ ಎಂದರು. ಅಂದರೆ ಈ ದೇಶ ಮತ್ತು ಕಾಂಗ್ರೆಸ್ ಸಮಾನಾರ್ಥಕ ಪದಗಳೇ? ಇದು ದೇಶದ ಜನರಿಗೆ ಅವಮಾನ ಮಾಡಿದಂತೆ’ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
‘ಲೋಕಸಭಾ ಚುನಾವಣೆಯಲ್ಲಿಬಿಜೆಪಿಯ ಗೆಲುವಿಗೆಮಾಧ್ಯಮಗಳು ಕಾರಣ ಎನ್ನುವ ಕಾಂಗ್ರೆಸ್ ಹೇಳಿಕೆಯನ್ನು ಟೀಕಿಸಿದ ಮೋದಿ, ನಮ್ಮ ದೇಶದಲ್ಲಿ ಕಾಸಿಗಾಗಿ ಸುದ್ದಿ ಮಾಡುವ ಮಾಧ್ಯಮಗಳು ಇವೆಯೇ ಎಂದು ಪ್ರಶ್ನಿಸಿದರು.
ಈ ಹಿಂದೆ ನಾವು ಕಷ್ಟದ ದಿನಗಳನ್ನು ನೋಡಿದ್ದೇವೆ. ಅನೇಕ ಚುನಾವಣೆಗಳನ್ನು ನೋತಿದ್ದೇವೆ. ಆದರೆ ಸೋತ ನಂತರ ಎಂದಿಗೂ ಗೆದ್ದವರನ್ನು ಹೀಗೆ ದೂಷಿಸುತ್ತಿರಲಿಲ್ಲ. ಬದಲಿಗೆ ನಮ್ಮ ಕಾರ್ಯಕರ್ತರ ಮೇಲೆ ವಿಶ್ವಾಸವಿಟ್ಟು ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು ಎಂದು ಮೋದಿ ನೆನಪಿಸಿಕೊಂಡರು.
‘ಇದು (2019) ಈ ದೇಶದ ಕೊನೆಯ ಚುನಾವಣೆಯೇನೂ ಅಲ್ಲ. ಇನ್ನೂ ಸಾಕಷ್ಟು ಚುನಾವಣೆಗಳು ಬರಲಿವೆ. ಅಷ್ಟೊಂದು ನಿರಾಸೆ ಏಕೆ? ನೀವು ಅನೇಕ ವರ್ಷ ಅಧಿಕಾರ ಅನುಭವಿಸಿದ್ದೀರಿ. ಹೀಗಾಗಿಯೇಸೋಲನ್ನು ಜೀರ್ಣಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.