ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಪರೇಷನ್‌ ಕಮಲ’ ಸೋತಿದ್ದೇಕೆ?

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ‘ಆಪರೇಷನ್‌ ಕಮಲ’ ಮಾಡಿ ವಿರೋಧಿ ಶಾಸಕರನ್ನು ಸೆಳೆಯುವಲ್ಲಿ ವಿಫಲವಾಗಲು ಕಾರಣಗಳೇನು ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಇದಕ್ಕೆ ಎರಡು ಮುಖ್ಯ ಕಾರಣಗಳು. ಮೊದಲನೆಯದು, ಶಾಸಕರನ್ನು ಸೆಳೆಯಲು ಬಿಜೆಪಿಗೆ ಸಾಕಷ್ಟು ಸಮಯ ಸಿಗಲಿಲ್ಲ. ಎರಡನೆಯದು, ಬಿಜೆಪಿಯಲ್ಲಿ ಮುಂದೆ ತಮ್ಮ ಭವಿಷ್ಯ ಅನಿಶ್ಚಿತ ಎನ್ನುವುದು. ಈ ಹಿಂದೆ ‘ಆಪರೇಷನ್‌ ಕಮಲ’ಕ್ಕೆ ಒಳಗಾಗಿ ಬಿಜೆಪಿ ಸೇರಿದ ಎಲ್ಲ ಶಾಸಕರು ಬಳಿಕ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದರು, ಆದ್ದರಿಂದ ಬಿಜೆಪಿಗೆ ಜಿಗಿಯಲು ಹಲವು ಶಾಸಕರು ಹಿಂದೇಟು ಹಾಕಿದರು ಎಂದು ಮೂಲಗಳು ಹೇಳಿವೆ.

ಅಲ್ಲದೆ, 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳೂ ಒಗ್ಗೂಡುವುದರಿಂದ, ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಂತದಲ್ಲಿ ಬಿಜೆಪಿಯನ್ನು ಸೇರಿದರೆ ರಾಜ
ಕೀಯ ಭವಿಷ್ಯ ಅತಂತ್ರ ಆಗಬಹುದು ಎಂಬ ಕಳವಳಕ್ಕೆ ಒಳಗಾದ ಕಾರಣ ಬಿಜೆಪಿಯ ಆಮಿಷಕ್ಕೆ ಬಲಿಯಾಗಲಿಲ್ಲ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯಾದ ಬಳಿಕ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಎದ್ದಿದೆ. ಈ ಹಂತದಲ್ಲಿ ಬಿಜೆಪಿ ಸೇರುವುದನ್ನು ಕ್ಷೇತ್ರದ ಜನರೂ ಒಪ್ಪುವುದು ಕಷ್ಟ. ಒಂದು ವೇಳೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ಪುನಃ ಗೆಲ್ಲುವುದು ಸುಲಭವಿರಲಿಲ್ಲ ಎಂದೂ ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.

ಅಲ್ಲದೆ, ಬಿಜೆಪಿ ನಾಯಕರು ಸಂಪರ್ಕಿಸಿದ ಕೆಲವು ಶಾಸಕರು ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧವೇ ಜಿದ್ದಾಜಿದ್ದಿನ ಹೋರಾಟ ನಡೆಸಿದ್ದರು. ಮತ್ತೆ ಬಿಜೆಪಿಗೆ ಪಕ್ಷಾಂತರ ಮಾಡಿದರೆ, ಕ್ಷೇತ್ರದ ಜನ ಸಿಟ್ಟಿಗೇಳುವ ಸಾಧ್ಯತೆಯೂ ಇದ್ದುದು ಅವರು ಹಿಂದೇಟು ಹಾಕಲು ಕಾರಣ ಎನ್ನಲಾಗಿದೆ.

ಬೆಂಬಲವೇ ರಕ್ಷೆ: ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ತಂತ್ರಗಾರಿಕೆಯಿಂದ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್, ಕರ್ನಾಟಕದ ವಿಷಯದಲ್ಲಿ ಮೊದಲೇ ರಣತಂತ್ರ ರಚಿಸಿತ್ತು. ಯಾವುದೇ ಪಕ್ಷಕ್ಕೂ ಬಹುಮತ ಸಿಗದೇ ಇದ್ದರೆ, ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ ಕೊಟ್ಟು, ಬಿಜೆಪಿ ಅಧಿಕಾರಕ್ಕೇರುವುದನ್ನು ತಪ್ಪಿಸುವ ನಿರ್ಧಾರವನ್ನು ಕಾಂಗ್ರೆಸ್‌ ಹೈಕಮಾಂಡ್‌ ಮಾಡಿತ್ತು.

ಹೀಗಾಗಿ, ಜೆಡಿಎಸ್‌ಗೆ ಸರ್ಕಾರ ರಚಿಸುವ ಅವಕಾಶ ಅನಾಯಾಸವಾಗಿ ಸಿಕ್ಕಿತು. ಇದನ್ನು ಬಿಟ್ಟು ಕೊಡುವ ಪ್ರಮೇಯವೇ ಜೆಡಿಎಸ್‌ಗೆ ಇರಲಿಲ್ಲ. ತನ್ನ ಶಾಸಕರನ್ನು ಭದ್ರವಾಗಿ  ಹಿಡಿದಿಟ್ಟುಕೊಂಡಿತು. ಇನ್ನೊಂದೆಡೆ, ಕಾಂಗ್ರೆಸ್‌ ತನ್ನ ಶಾಸಕರು ಜಿಗಿಯದಂತೆ ಕೋಟೆಯನ್ನು ಭದ್ರಪಡಿಸಿಕೊಂಡಿತು. ಬಿಜೆಪಿ ಮುಖಂಡರು ‘ಆಪರೇಷನ್‌ ಕಮಲ’ ಮಾಡಿ ಶಾಸಕರನ್ನು ಸೆಳೆಯಬಹುದು ಎಂಬ ಸುಳಿವು ಸಿಕ್ಕ ತಕ್ಷಣವೇ, ಆಮಿಷಕ್ಕೆ ಒಳಗಾಗುವ ಶಾಸಕರ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿತು. ಅವರೊಂದಿಗೆ ಡಿ.ಕೆ.ಶಿವಕುಮಾರ್ ಖುದ್ದಾಗಿ ಮಾತುಕತೆ ನಡೆಸಿ ಬಂದೋಬಸ್ತ್‌ ಮಾಡಿದರು.

ಈ ಎಲ್ಲ ಕಾರ್ಯವನ್ನೂ ಹೈಕಮಾಂಡ್‌ ನಿರ್ದೇಶನದ ಅನ್ವಯವೇ ಡಿ.ಕೆ.ಶಿವಕುಮಾರ್‌ ಮತ್ತು ಅವರ ಸಹೋದರ ಡಿ.ಕೆ.ಸುರೇಶ್‌ ನೋಡಿಕೊಂಡರು.

ಸಿಗದ ಸಮಯ: ವಿರೋಧಿ ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಮುಖಂಡರಿಗೆ ಸಮಯವೇ ಸಿಗಲಿಲ್ಲ. ರಾಜ್ಯಪಾಲರು ಬಹುಮತ ಸಾಬೀತಿಗೆ 15 ದಿನಗಳನ್ನು ನೀಡಿದ್ದರು. ಆದರೆ, ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು ಬಿಜೆಪಿಗೆ ಹಿನ್ನಡೆಯಾಯಿತು.

ಕಾಂಗ್ರೆಸ್‌ ಮುಖಂಡರೊಬ್ಬರ ಪ್ರಕಾರ, ಬಿಜೆಪಿಗೆ ಒಂದು ವೇಳೆ ಹೆಚ್ಚು ಸಮಯ ಸಿಕ್ಕಿದ್ದರೆ, ಸಾಕಷ್ಟು ಶಾಸಕರನ್ನು ಸೆಳೆಯುತ್ತಿತ್ತು. ಕಡಿಮೆ ಸಮಯ ಸಿಕ್ಕಿದ್ದರಿಂದ ಅವರ ಪ್ರಯತ್ನಗಳೆಲ್ಲವೂ ವಿಫಲವಾದವು.

ಅಲ್ಲದೆ, ಶಾಸಕರನ್ನು ರೆಸಾರ್ಟ್‌ನಲ್ಲಿ ಇಟ್ಟುಕೊಂಡಿದ್ದಾಗ, ಈ ಹಿಂದೆ ‘ಆಪರೇಷನ್‌ ಕಮಲ’ದಡಿ ಬಿಜೆಪಿಗೆ ಹೋಗಿ ಸಂಕಟ ಅನುಭವಿಸಿದವರೂ ಉಳಿದ ಶಾಸಕರಿಗೆ ತಮ್ಮ ಅನುಭವಗಳನ್ನು ಹೇಳಿಕೊಂಡು, ಅಲ್ಲಿಗೆ ಹೋಗದಿರುವಂತೆಯೂ ಎಚ್ಚರಿಸಿದರು ಎಂದೂ ಕಾಂಗ್ರೆಸ್‌ ಶಾಸಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT