ಕಾರ್ಗಲ್: ಇಲ್ಲಿಗೆ ಸಮೀಪದ ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿರುವ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಂಕಿತ ಮಂಗನ ಕಾಯಿಲೆಯಿಂದ ಮಂಗಳವಾರ ಕಂಚೀಕೈ ಮಂಜುನಾಥ (26) ಎಂಬುವವರು ಮೃತಪಟ್ಟಿದ್ದಾರೆ. ಇದು ಈ ಭಾಗದಲ್ಲಿ ಮೂರನೇ ಸಾವು.
ಮಂಜುನಾಥ ಅವಿವಾಹಿತನಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಅವರು ತಂದೆ ತಾಯಿ ಜತೆಗೆ ಶರಾವತಿ ಹಿನ್ನೀರ ಪ್ರದೇಶವಾದ ಕಂಚೀಕೈನಲ್ಲಿ ವಾಸವಾಗಿದ್ದರು.
ಮಂಗಳವಾರ ಬೆಳಿಗ್ಗೆ ಜ್ವರದಿಂದ ಅಸ್ವಸ್ಥಗೊಂಡ ಮಂಜುನಾಥ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಮೃತಪಟ್ಟರೆಂದು ಕುಟುಂಬದ ಮೂಲಗಳು ತಿಳಿಸಿದೆ.