ಲಿಂಗಸುಗೂರು (ರಾಯಚೂರು ಜಿಲ್ಲೆ):‘ಮೌಢ್ಯ, ಕಂದಾಚಾರ, ಅಸಮಾನತೆ ವಿರೋಧಿಸುತ್ತೇನೆ. ಆದರೆ, ಮೌಢ್ಯ ಆಚರಣೆ ಮೂಲಕ ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶುಕ್ರವಾರ ರಾತ್ರಿ ನಗರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದೆ. ಮೌಢ್ಯಗಳನ್ನು ಬಹಿರಂಗವಾಗಿ ಆಚರಿಸುತ್ತಿರುವ ಕುಮಾರಸ್ವಾಮಿ ವಿರುದ್ಧ ತಮ್ಮ ಹೋರಾಟ ಮೊಟಕುಗೊಳಿಸಿದ್ದು ನ್ಯಾಯವೇ’ ಎಂಬ ಪ್ರಶ್ನೆಗೆ ಕೆಲ ಸಮಯ ತಬ್ಬಿಬ್ಬಾದ ಸಚಿವರು, ‘ಕಾಲಘಟ್ಟ ನಿರ್ಣಯಿಸುತ್ತದೆ. ಪೂರ್ಣ ಪ್ರಮಾಣದ ಸರ್ಕಾರ ಬಂದಾಗ ನೋಡೋಣ’ ಎಂದು ನುಣುಚಿಕೊಂಡರು.