ಚಿಕ್ಕೋಡಿ ತಾಲ್ಲೂಕಿನಲ್ಲಿ ವೇದಗಂಗಾ ಮತ್ತು ದೂಧ್ಗಂಗಾ ನದಿಗೆ ಕಟ್ಟಿರುವ ಸದಲಗಾ–ಬೋರಗಾಂವ ಮತ್ತು ದೂಧ್ಗಂಗಾ ನದಿಗೆ ನಿರ್ಮಿಸಿರುವ ಯಕ್ಸಂಬಾ–ದಾನವಾಡ ಸೇತುವೆಗಳು ಮುಳುಗಡೆಯಾಗಿವೆ. ಉಳಿದ 6 ಸೇತುವೆಗಳು ನಾಲ್ಕು ದಿನಗಳಿಂದಲೂ ಮುಳುಗಡೆ ಸ್ಥಿತಿಯಲ್ಲಿಯೇ ಇವೆ. ರಾಯಬಾಗ ತಾಲ್ಲೂಕಿನ ಕುಡಚಿ ಬಳಿ ಸೇತುವೆಯಲ್ಲಿ ನೀರಿನ ಪ್ರಮಾಣ ಇಳಿದಿಲ್ಲ. ಅಥಣಿ ತಾಲ್ಲೂಕಿನ ನದಿಇಂಗಳಗಾಂವ–ತೀರ್ಥ, ಸಪ್ತಸಾಗರ–ಬನದವಸತಿ, ಕೊಕಟನೂರ–ಶಿರಹಟ್ಟಿ ಹಾಗೂ ಜುಂಜರವಾಡ–ತುಬಚಿ ಸೇತುವೆಗಳು ಮುಳುಗಿವೆ. ಇವುಗಳಿಗೆ ಪರ್ಯಾಯ ರಸ್ತೆಗಳಿರುವುದರಿಂದ ಸಂಪರ್ಕ ಕಡಿತವಾಗಿಲ್ಲ.